ಚಿತ್ರ: ಗ್ರಾಮಾಯಣ****
ನಿರ್ದೇಶನ: ದೇವನೂರು ಚಂದ್ರು
ನಿರ್ಮಾಪಕರು: ಲಹರಿ ವೇಲು, ಜಿ.ಮನೋಹರನ್, ನವೀನ್ ಮನೋಹರನ್
ತಾರಾಗಣ: ವಿನಯ್ ರಾಜ್ ಕುಮಾರ್, ಮೇಘಾ ಶೆಟ್ಟಿ, ಗೋಪಾಲಕೃಷ್ಣ ದೇಶಪಾಂಡೆ ಮೊದಲಾದವರು.
ಗ್ರಾಮೀಣ ಕಥೆಯೊಂದಿಗೆ ವಿನಯ್ ರಾಜ್ ಕುಮಾರ್ ಹಾಜರಾಗಿದ್ದಾರೆ. ದೊಡ್ಮನೆ ಹುಡುಗ ಹಳ್ಳಿಹೈದನಾಗಿ ಹೇಗೆ ಕಾಣಿಸುತ್ತಾರೆ ಎನ್ನುವ ಕುತೂಹಲಕ್ಕೆ ಸಿಕ್ಕಿರುವ ಉತ್ತರವೇ ಗ್ರಾಮಾಯಣ.
ಆತನ ಹೆಸರು ಸೀನ. ಸಿಕ್ಸ್ತ್ ಸೆನ್ಸ್ ಸೀನ ಎಂದೇ ಹಳ್ಳಿಗರು ಕರೆಯುತ್ತಾರೆ. ಕಾಲೇಜು ಕಲಿತವನು. ಆದರೆ ಹಳ್ಳಿಯಲ್ಲೇ ಕೆಲಸ ಮಾಡುವುದು ಆತನ ಕನಸು. ಸೀನನ ಈ ಕನಸಿಗೆ ಅದೇ ಹಳ್ಳಿಯ ರಾಜಕಾರಣಿಗಳೇ ತಣ್ಣೀರೆರಚುತ್ತಾರೆ. ಅದಕ್ಕೆ ಕಾರಣವೇನು ಹಾಗೂ ಸೀನನ ಪ್ರತಿಕ್ರಿಯೆ ಹೇಗಿರುತ್ತದೆ ಎನ್ನುವುದನ್ನು ಥಿಯೇಟರ್ ನಲ್ಲಿ ನೋಡಬಹುದು.
ಇಡೀ ಚಿತ್ರದ ಕಥೆ ಸೀನನ ಸುತ್ತಲೇ ನಡೆಯುತ್ತದೆ. ಸೀನನಾಗಿ ವಿನಯ್ ರಾಜ್ ಕುಮಾರ್ ನಟನೆ ಎಲ್ಲರ ಮನ ಗೆಲ್ಲುವಂತಿದೆ. ಹಳ್ಳಿ ಶೈಲಿಯ ಮಾತು, ನಡವಳಿಕೆ ಮಾತ್ರವಲ್ಲ ವಸ್ತ್ರಶೈಲಿಗೂ ಹೊಂದಿಕೊಳ್ಳುವುದು ವಿಶೇಷ. ಒಟ್ಟಿನಲ್ಲಿ ವಿನಯ್ ರಾಜ್ ಕುಮಾರ್ ಡಿಫರೆಂಟ್ ಲುಕ್ ನಲ್ಲಿ ಗೆದ್ದಿದ್ದಾರೆ ಎಂದೇ ಹೇಳಬಹುದು. ಚಿತ್ರದ ನಾಯಕಿ ಮೇಘ ಶೆಟ್ಟಿ ಕೂಡ ವಿಭಿನ್ನವಾಗಿ ಕಾಣಿಸಿದ್ದಾರೆ. ಗಂಡು ಬೀರಿಯ ಪಾತ್ರದಲ್ಲಿ ಕೂಡ ಕಾಣಿಸಬಲ್ಲೆ ತೋರಿಸಿ ಕೊಟ್ಟಿದ್ದಾರೆ.
ಚಿತ್ರದ ಪೋಷಕ ಪಾತ್ರಗಳಲ್ಲಿ ಖ್ಯಾತ ತಾರೆಯರ ದಂಡೇ ನೆರೆದಿದೆ. ಪ್ರಮುಖವಾಗಿ ಲೂಸ್ ಮಾದ ಯೋಗಿ ಕಳ್ಳಬೆಕ್ಕು ಎನ್ನುವ ಖಳ ಪಾತ್ರವನ್ನು ನಿಭಾಯಿಸಿ ಅಚ್ಚರಿ ಮೂಡಿಸಿದ್ದಾರೆ. ನಾಯಕನೊಂದಿಗೆ ಹೊಡೆದಾಡುವ ದೃಶ್ಯಗಳು ಸೀಟಿ ಹೊಡೆಯುವಂತೆ ಮೂಡಿವೆ. ಯೋಗಿಯನ್ನು ಛೂ ಬಿಡುವ ರಾಜಕಾರಣಿಯಾಗಿ ಗೋಪಾಲಕೃಷ್ಣ ದೇಶಪಾಂಡೆ ನಟಿಸಿದ್ದಾರೆ. ಗ್ರಾಮದ ಸ್ಥಳೀಯ ವೈದ್ಯರ ಪಾತ್ರವೊಂದನ್ನು ಅಚ್ಯುತ್ ಕುಮಾರ್ ಅದ್ಭುತವಾಗಿ ನಿಭಾಯಿಸಿದ್ದಾರೆ. ಬಲರಾಜ ವಾಡಿ, ಸೀತಾ ಕೋಟೆ, ಅರುಣ್ ಸಾಗರ್ ಹೀಗೆ ಪ್ರತಿಯೊಬ್ಬರ ಪಾತ್ರಗಳು ಕೂಡ ಕಾಡುವಂತೆ ಮೂಡಿ ಬಂದಿದೆ.