ಜನ ಮೆಚ್ಚುವ ಸಂದೇಶಾತ್ಮಕ ಹಾಸ್ಯ ಚಿತ್ರ ’ಅಮೃತಾ ಅಂಜನ್’
ಚಿತ್ರ: ಅಮೃತಾ ಅಂಜನ್
ನಿರ್ದೇಶಕ: ಜ್ಯೋತಿ ರಾವ್ ಮೋಹಿತ್
ನಿರ್ಮಾಪಕ: ಲೋಕೇಶ್
ತಾರಾಗಣ: ಸುಧಾಕರ್ ಗೌಡ, ಪಾಯಲ್ ಚೆಂಗಪ್ಪ ಮೊದಲಾದವರು.
ಹಾಸ್ಯಮಯ ಚಿತ್ರವೊಂದು ಹೇಗೆ ಇರಬೇಕು ಎನ್ನುವುದಕ್ಕೆ ಉದಾಹರಣೆಯಾಗಿ ಮೂಡಿಬಂದಿರುವ ಚಿತ್ರ ಅಮೃತಾ ಅಂಜನ್. ಕಥೆಯೊಳಗೆ ಅದೆಷ್ಟೇ ತಿರುವುಗಳಿದ್ದರೂ ಆರಂಭದಿಂದ ಅಂತ್ಯದ ತನಕ ಸದಾ ಒಂದು ನಗು ಇರಿಸಿಕೊಂಡೇ ಚಿತ್ರ ನೋಡುವಂತೆ ಮಾಡುವಲ್ಲಿ ಈ ಸಿನಿಮಾದ ಸಂಭಾಷಣೆಗೆ ಪ್ರಧಾನ ಪಾತ್ರವಿದೆ.
ಅಮೃತಾ ಮತ್ತು ಅಂಜನ್ ಕಥೆ ಹೇಳುತ್ತಾ ಸಾಗುವ ಚಿತ್ರ ಒಂದು ಪ್ರೇಮಕಥೆಯಾಗಿ ಉಳಿದಿಲ್ಲ. ಮಕ್ಕಳು ಕೌಟುಂಬಿಕವಾಗಿ ಪಾಲಿಸಬೇಕಾದ ಅಂಶಗಳೇನು ಎನ್ನುವುದನ್ನು ಸಂದೇಶವಾಗಿ ನೀಡಲಾಗಿರುವ ಈ ಚಿತ್ರ ನಿಸ್ಸಂದೇಹವಾಗಿ ಕುಟುಂಬ ಸಮೇತ ನೋಡಿ ಖುಷಿ ಪಡುವಂತಿದೆ.
ಯೂಟ್ಯೂಬ್ ವಾಹಿನಿಯಲ್ಲಿ ನಿರ್ದೇಶಕರಾಗಿ ಜನಪ್ರಿಯರಾಗಿರುವ ಜ್ಯೋತಿರಾವ್ ಮೋಹಿತ್ ಈ ಬಾರಿ ಬೆಳ್ಳಿ ಪರದೆಯ ಮೇಲೆಯೂ ಅಷ್ಟೇ ಆಕರ್ಷಕವಾದ ಸಿನಿಮಾ ನೀಡಿದ್ದಾರೆ.
ಸಿನಿಮಾದಲ್ಲಿ ಅಪ್ಪ ಮಗನ ಪಾತ್ರಕ್ಕೆ ಪ್ರಾಮುಖ್ಯತೆ ನೀಡಲಾಗಿದೆ. ಮಗನಿಗಾಗಿ ತಂದೆ ಏನೆಲ್ಲ ತ್ಯಾಗ ಮಾಡಬಹುದು ಎನ್ನುವುದನ್ನು ಮನಮಿಡಿಯುವ ಹಾಗೆ ತೋರಿಸಲಾಗಿದೆ. ಒಂದು ಕಡೆ ಕಥೆ ಗಂಭೀರವಾಗಿ ಸಾಗಬೇಕಾದರೆ ಹಾಸ್ಯದ ಟ್ರ್ಯಾಕ್ ಕೂಡ ಪಕ್ಕದಲ್ಲೇ ಸಾಗಿ ಬಂದು ಪ್ರೇಕ್ಷಕರನ್ನು ಸದಾ ಲವಲವಿಕೆಯಲ್ಲಿರಿಸುತ್ತದೆ.
ಪ್ರೇಮಿಗಳಾಗಿ ಸುಧಾಕರ್ ಗೌಡ ಹಾಗೂ ಪಾಯಲ್ ಚೆಂಗಪ್ಪ ನಟಿಸಿದ್ದಾರೆ. ಇಬ್ಬರು ಕೂಡ ಪಾತ್ರಕ್ಕೆ ಬೇಕಾದ ಭಾವನೆಗಳನ್ನು ಸಮರ್ಥವಾಗಿ ಪ್ರದರ್ಶಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇವರಿಬ್ಬರ ಮಧ್ಯೆ ಕಾರ್ತಿಕ್ ಕೂಡ ಪ್ರಮುಖ ಪಾತ್ರವೊಂದನ್ನು ನಿರ್ವಹಿಸಿದ್ದಾರೆ. ಈ ಮೂರು ಪಾತ್ರಗಳ ಕಾಂಬಿನೇಶನ್ ಚಿತ್ರಸ ಹೈಲೈಟ್. ಇದೇ ಸಂದರ್ಭದಲ್ಲಿ ಹಾಸ್ಯದ ಮೂಲಕ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸುವ ಇಬ್ಬರನ್ನು ಕೂಡ ಮರೆಯುವ ಹಾಗಿಲ್ಲ. ಆ ಎರಡು ಪಾತ್ರಗಳಲ್ಲಿ ಶ್ರೀ ಭವ್ಯಾ ಮತ್ತು ಗೌರವ್ ಶೆಟ್ಟಿ ಎಂಟ್ರಿ ನೀಡಿದ್ದಾರೆ. ಈ ಚಿತ್ರದ ಬಳಿಕ ಇವರಿಬ್ಬರಿಗೂ ಗಗನ ಹೊಸ ಅವಕಾಶಗಳ ಸುರಿಮಳೆಯಾಗುವುದರಲ್ಲಿ ಯಾವ ಸಂದೇಹವೂ ಬೇಕಾಗಿಲ್ಲ. ಅದೇ ರೀತಿ ಪಲ್ಲವಿಯರ ಪಾತ್ರದ ಬಗ್ಗೆಯೂ ಉಲ್ಲೇಖಿಸಲೇಬೇಕು.
ಚಿತ್ರದ ಹಿನ್ನೆಲೆ ಸಂಗೀತದಲ್ಲಿ ಹೊಸತನವಿದೆ. ಮುಖ್ಯವಾಗಿ ಈ ತಂಡಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಅಪಾರ ಅಭಿಮಾನಿಗಳಿದ್ದಾರೆ. ವಿಶೇಷ ಏನೆಂದರೆ ಚಿತ್ರ ನೋಡಿದ ಸಿನಿಮಾ ಪ್ರೇಕ್ಷಕರು ಕೂಡ ಒಂದೇ ಚಿತ್ರದಲ್ಲೇ ಇವರಿಗೆ ಫಿದಾ ಆಗಿದ್ದಾರೆ. ಸಿನಿಮಾ ನೋಡಿ ಮನಸು ಹಗುರ ಮಾಡಿಕೊಳ್ಳಬೇಕು ಎನ್ನುವ ಗುರಿ ಇರುವವರು ಖಂಡಿತವಾಗಿ ನೋಡಕೇಬೇಕಾದ ಚಿತ್ರ ಇದು.