ಕನ್ನಡದ ಮೇರು ಸಾಹಿತಿ ಡಾ. ವಿ. ನಾಗೇಂದ್ರ ಪ್ರಸಾದ್ ಅವರ 50ನೇ ಜನ್ಮವರ್ಷಾಚರಣೆ ಅಂಗವಾಗಿ “ಕವಿರತ್ನ ಸಾರ್ಥಕ ಸುವರ್ಣ” ಕಾರ್ಯಕ್ರಮವನ್ನು 2026ರ ಜುಲೈ 19ರಂದು ಬೆಳಿಗ್ಗೆ 10.00 ಗಂಟೆಯಿಂದ ರಾತ್ರಿ 10.00 ಗಂಟೆಯವರೆಗೆ ಬೆಂಗಳೂರಿನಲ್ಲಿ ಅತ್ಯಂತ ವೈಭವದಿಂದ ಆಯೋಜಿಸಿದ್ದೇವೆ.
ಅವರ ಜನ್ಮದ 50ನೇ ವರ್ಷವನ್ನು ನೆಪವಾಗಿಸಿಕೊಂಡು, ಕಳೆದ ಮೂರು ದಶಕಗಳಿಂದ ಕನ್ನಡ ಚಿತ್ರರಂಗಕ್ಕೆ ಅವರು ನೀಡಿರುವ ಅಪಾರ ಕೊಡುಗೆಯನ್ನು ಗೌರವಿಸುವುದು ಹಾಗೂ ಅವರು ರಚಿಸಿರುವ 3,000ಕ್ಕೂ ಹೆಚ್ಚು ಹಾಡುಗಳ ಸಂಭ್ರಮವನ್ನು ಆಚರಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ.
ಈ ಕಾರ್ಯಕ್ರಮದಲ್ಲಿ ಕನ್ನಡ ಚಿತ್ರರಂಗದ ಸುಮಾರು 1,000ಕ್ಕೂ ಹೆಚ್ಚು ನಟರು, ನಿರ್ದೇಶಕರು, ನಿರ್ಮಾಪಕರು, ಸಂಗೀತ ನಿರ್ದೇಶಕರು, ಗಾಯಕ-ಗಾಯಕಿಯರು, ತಂತ್ರಜ್ಞರು ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು ಭಾಗವಹಿಸಲಿದ್ದಾರೆ. ಅಲ್ಲದೆ ಕೇಂದ್ರ ಸಚಿವರು, ರಾಜ್ಯದ ಮುಖ್ಯಮಂತ್ರಿ ಹಾಗೂ ಅನೇಕ ಗಣ್ಯರು ಉದ್ಘಾಟನಾ ಮತ್ತು ಸಮಾರೋಪ ಸಮಾರಂಭದಲ್ಲಿ ಉಪಸ್ಥಿತರಿರುವರು.
ಕಾರ್ಯಕ್ರಮದ ವಿಶೇಷವಾಗಿ 100ಕ್ಕೂ ಹೆಚ್ಚು ನಾಗೇಂದ್ರ ಪ್ರಸಾದ್ ಅವರ ಗೀತೆಗಳನ್ನು ಖ್ಯಾತ ಗಾಯಕರಾದ ರಾಜೇಶ್ ಕೃಷ್ಣನ್, ವಿಜಯ್ ಪ್ರಕಾಶ್ ಸೇರಿದಂತೆ ಕನ್ನಡ ಚಿತ್ರರಂಗದ ಅನೇಕ ಗಾಯಕ-ಗಾಯಕಿಯರು ಪ್ರಸ್ತುತಪಡಿಸಲಿದ್ದಾರೆ. ಜೊತೆಗೆ ಹಂಸಲೇಖ, ಅರ್ಜುನ್ ಜನ್ಯ, ವಿ. ಹರಿಕೃಷ್ಣ, ವಿ. ಮನೋಹರ್, ಶ್ರೀಧರ್ ಸಂಭ್ರಮ, ಗುರುಕಿರಣ್, ಕೆ. ಕಲ್ಯಾಣ್, ಕವಿರಾಜ್ ಸೇರಿದಂತೆ ಅನೇಕ ಸಂಗೀತ ನಿರ್ದೇಶಕರು ಮತ್ತು ಸಾಹಿತಿಗಳು ಈ ಸಂಭ್ರಮದಲ್ಲಿ ಭಾಗಿಯಾಗಲಿದ್ದಾರೆ.