*ಸಂಗೀತ ಪ್ರಪಂಚದಲ್ಲಿ ವಿಜಯ್ ಪ್ರಕಾಶ್ ಹೊಸ ಹೆಜ್ಜೆ*
*ವಿಜಯ್ ಪ್ರಕಾಶ್ ಕಲ್ಚರಲ್ ಕ್ಲಬ್, ದ್ವಾರ್ ಸ್ಟುಡಿಯೋಸ್ ಮತ್ತು ದ್ವಾರ್ ಮ್ಯೂಸಿಕ್ ಪ್ರಾರಂಭ*
ಸಿನಿಮಾ, ಶಾಸ್ತ್ರೀಯ ಸಂಗೀತ ಸೇರಿದಂತೆ ಹಲವು ಪ್ರಕಾರಗಳಲ್ಲಿ ತಮ್ಮದೇ ಛಾಪು ಮೂಡಿಸಿರುವ ಅಂತಾರಾಷ್ಟ್ರೀಯ ಖ್ಯಾತಿಯ ಗಾಯಕ ಹಾಗೂ ಹೆಮ್ಮೆಯ ಕನ್ನಡಿಗ ವಿಜಯ್ ಪ್ರಕಾಶ್ ಹೊಸ ಹೆಜ್ಜೆ ಇಟ್ಟಿದ್ದಾರೆ. ಇಷ್ಟು ವರ್ಷಗಳ ತಮ್ಮ ಅನುಭವ, ಶ್ರಮ ಮತ್ತು ಹಣವನ್ನು ಧಾರೆ ಎರೆದು ವಿಜಯ್ ಪ್ರಕಾಶ್ ಕಲ್ಚರಲ್ ಕ್ಲಬ್, ದ್ವಾರ್ ಸ್ಟುಡಿಯೋಸ್ ಮತ್ತು ದ್ವಾರ್ ಮ್ಯೂಸಿಕ್ ಎಂಬ ಹೊಸ ಸಂಸ್ಥೆಗಳನ್ನು ಪ್ರಾರಂಭಿಸಿದ್ದಾರೆ. ಕೆರೆಯ ನೀರನು ಕೆರೆಗೆ ಚೆಲ್ಲಿ ಎನ್ನುವಂತೆ, ಸಂಗೀತದಲ್ಲಿ ಪಡೆದಿದನ್ನು ಸಂಗೀತಕ್ಕೇ ಕೊಡುತ್ತಿದ್ದಾರೆ.
ಬೆಂಗಳೂರಿನ ಹೊಸಕೆರೆಹಳ್ಳಿಯಲ್ಲಿರುವ ಸಪ್ತಗಿರಿ ಲೇಔಟ್ನಲ್ಲಿ ವಿಜಯ್ ಪ್ರಕಾಶ್ ಕಲ್ಚರಲ್ ಕ್ಲಬ್ (VPCC) ಮತ್ತು ದ್ವಾರ್ ಸ್ಟುಡಿಯೋಸ್ ನಿರ್ಮಾಣವಾಗಿದ್ದು, ತಮ್ಮ ಮೂರು ಹೊಸ ಸಾಹಸಗಳ ಕುರಿತು ವಿವರಣೆ ನೀಡಲು ವಿಜಯ್ ಪ್ರಕಾಶ್ ಮತ್ತು ಅವರ ಪತ್ನಿ ಮಹತಿ ವಿಜಯ್ ಪ್ರಕಾಶ್ ಮಾಧ್ಯಮದವರನ್ನು ಆಹ್ವಾನಿಸಿದ್ದರು.
ಈ ಕುರಿತು ಮಾತನಾಡಿದ ವಿಜಯ್ ಪ್ರಕಾಶ್, ‘ಇಡೀ ಭಾರತದಲ್ಲೇ ಒಂದು ಬೃಹತ್ ಸಂಗೀತ ಶಾಲೆಯೊಂದನ್ನು ಪ್ರಾರಂಭಿಸಬೇಕು ಎಂಬ ಆಸೆ ಇತ್ತು. ಅದು ಯಾವತ್ತು ಈಡೇರುತ್ತದೋ ಗೊತ್ತಿಲ್ಲ. ಈ ನಿಟ್ಟಿನಲ್ಲಿ ಒಂದು ಸಣ್ಣ ಹೆಜ್ಜೆ ಈ VPCC. ಕಲೆ ಇಷ್ಟೆಲ್ಲಾ ಕೊಟ್ಟಿರುವಾಗ, ಅದನ್ನು ಒಳ್ಳೆಯ ರೀತಿಯಲ್ಲಿ ಬಳಿಸಿಕೊಳ್ಳಬೇಕು, ಕಲೆಗಾಗಿ ಏನು ಮಾಡಬೇಕು ಎಂದು ಯೋಚಿಸಿದಾಗ ಹುಟ್ಟಿದ್ದೇ VPCC. ಆಸಕ್ತರಿಗೆ ಸಂಗೀತ ಪಾಠ ಹೇಳಿಕೊಡುವುದರ ಜೊತೆಗೆ, ಹಾಡುಗಳನ್ನು ನಿರ್ಮಾಣ ಮಾಡುವುದಕ್ಕೆ ಒಂದು ಸ್ಟುಡಿಯೋ ಮತ್ತು ಅದನ್ನು ಹೊರತರವ ನಿಟ್ಟಿನಲ್ಲಿ ದ್ವಾರ್ ಮ್ಯೂಸಿಕ್ ಎಂಬ ಯೂಟ್ಯೂಬ್ ಚಾನಲ್ ಪ್ರಾರಂಭಿಸಿದ್ದೇವೆ. ಸುಮಾರು ಮೂರು ವರ್ಷಗಳ ಹಿಂದೆ ಪ್ರಾರಂಭವಾದ ಈ ಕನಸು, ಈಗ ನನಸಾಗಿದೆ’ ಎಂದರು.
ಕಲಾವಿದರು, ಕಲಾಪೋಷಕರು ಮತ್ತು ಕಲಾರಸಿಕರು ಒಂದೇ ಜಾಗದಲ್ಲಿ ಸೇರಬೇಕು ಎಂಬ ಉದ್ದೇಶದಿಂದ VPCC ಪ್ರಾರಂಭಿಸಲಾಯಿತು ಎಂದು ಮಾಹಿತಿ ನೀಡಿದ ಮಹತಿ ವಿಜಯ್ ಪ್ರಕಾಶ್, ‘ಚಿಕ್ಕ ವಯಸ್ಸಿನಲ್ಲಿ ಹಾಡು, ನೃತ್ಯದ ಬಗ್ಗೆ ಅತಿವ ಆಸಕ್ತಿ ಇರುತ್ತದೆ. ಜವಾಬ್ದಾರಿಗಳು, ಒತ್ತಡಗಳಿಂದ ಅದನ್ನು ಮುಂದುವರೆಸುವುದಕ್ಕೆ ಆಗುವುದಿಲ್ಲ. ಅದರಿಂದ ಹವ್ಯಾಸಗಳನ್ನು ಬಿಟ್ಟುಬಿಡುತ್ತೇವೆ. ಹಾಗೆ ತಮ್ಮ ಹವ್ಯಾಸ ಮುಂದುವರೆಸುವ ಆಸಕ್ತಿ ಉಳ್ಳುವರು ಕಲಾಪ್ರಪಂಚಕ್ಕೆ ಪುನಃ ಬರಲಿ, ಹೊಸದಾಗಿ ಕಲಿತು ಬೆಳೆಯಲಿ ಎಂಬ ಕಾರಣಕ್ಕೆ ಈ ಸಂಸ್ಥೆಯನ್ನು ಪ್ರಾರಂಭಿಸಲಾಗಿದೆ. ಇಲ್ಲಿ ವೈದ್ಯರು, ಸರ್ಕಾರಿ ಮತ್ತು ಖಾಸಗಿ ಸಂಸ್ಥೆಯ ಉದ್ಯೋಗಿಗಳು, ಗೃಹಿಣಿಯರು, ಮಕ್ಕಳು, ಹಿರಿಯ ನಾಗರಿಕರಿದ್ದಾರೆ. ನಾಲ್ಕು ವರ್ಷದವರಿಂದ 82 ವರ್ಷದ ವಯೋಮಾನದವರಿದ್ದಾರೆ. ಅವರಿಗೆ ರಂಗಗೀತೆಗಳು, ಜಾನಪದ, ಭಾವಗೀತೆ, ಭಕ್ತಿಗೀತೆ, ಸಿನಿಮಾ ಗೀತೆ ಸೇರಿದಂತೆ ಹಲವು ಪ್ರಕಾರದ ಸಂಗೀತವನ್ನು ಹೇಳಿಕೊಡಲಾಗುತ್ತದೆ’ ಎಂದರು.
ದ್ವಾರ್ ಸ್ಟುಡಿಯೋಸ್ನಲ್ಲಿ (Dvaar Studios) ಆಸಕ್ತರಿಗೆ ತಮ್ಮ ಸಂಗೀತವನ್ನು ನಿರ್ಮಾಣ ಮಾಡುವುದಕ್ಕೆ ಅವಕಾಶ ಮಾಡಿಕೊಡಲಾಗಿದೆ. ಯಾರಿಗೆ ತಮ್ಮ ಹಾಡು ರೆಕಾರ್ಡ್ ಮಾಡುವುದಕ್ಕೆ ಆಸಕ್ತಿ ಇದೆಯೋ, ಅವರು ತಮ್ಮ ಹಾಡನ್ನು ಇಲ್ಲಿ ರೆಕಾರ್ಡ್ ಮಾಡಬಹುದು. ಅವರಿಗೆ ಸಹಾಯ ಮಾಡುವುದಕ್ಕೆ ಸಂಗೀತ ನಿರ್ದೇಶಕರು ಸೇರಿದಂತೆ ಹಲವು ತಂತ್ರಜ್ಞರು ಇಲ್ಲಿದ್ದಾರೆ. ಹಾಡುವುದಕ್ಕೆ ಇಷ್ಟವಿರುವವರು ಬಂದು ಇಲ್ಲಿ ಹಾಡಬಹುದು.
ಇನ್ನು, ಮೂರನೆಯದಾಗಿ ಯೂಟ್ಯೂಬ್ನಲ್ಲಿ ದ್ವಾರ್ ಮ್ಯೂಸಿಕ್ (Dvaar Music) ಎಂಬ ಚಾನಲ್ ಪ್ರಾರಂಭಿಸಲಾಗಿದೆ. ಈಗಾಗಲೇ ಈ ಚಾನಲ್ನಲ್ಲಿ ‘ಬೆರೆತು’, ‘ಬಾನ ಸರದಾರ’, ‘ಅಹಂ ಸತ್’ ಮುಂತಾದ ಹಾಡುಗಳನ್ನು ಬಿಡುಗಡೆ ಮಾಡಲಾಗಿದೆ. ‘ನವರಾತ್ರಿ ಗೀತಮಾಲಾ’ ಎಂಬ ಹೆಸರಿನಡಿ ದುರ್ಗೆಯ ಒಂಬತ್ತು ರೂಪಗಳನ್ನು ಹಾಡುಗಳ ಮೂಲಕ ಕಟ್ಟಿಕೊಡಲಾಗಿದೆ. ಈ ಹಾಡುಗಳನ್ನು ವಿಜಯಪ್ರಕಾಶ್ ಅಲ್ಲದೆ, ಶಂಕರ್ ಮಹಾದೇವನ್, ಅನುರಾಧಾ ಭಟ್, ರಾಜೇಶ್ ಕೃಷ್ಣನ್, ಲಕ್ಷ್ಮೀ ನಾಗರಾಜ್, ಕೀರ್ತನ್ ಹೊಳ್ಳ, ಪ್ರಿಯಾಂಕಾ ಭಾರ್ವೆ, ಅನಿರುದ್ಧ್ ಐತಾಳ್ ಮತ್ತು ಶಿವಶ್ರೀ ಸ್ಕಂದಪ್ರಸಾದ್ ಹಾಡಿದ್ದಾರೆ. ಇದಲ್ಲದೆ, ತನುಷಾ ಕೆ.ಎಂ ಹಾಡಿರುವ ಮತ್ತು ಕೀರ್ತನ್ ಹೊಳ್ಳ ಸಂಗೀತ ಸಂಯೋಜಿಸಿರುವ ‘ಮೋಹ’ ಎಂಬ ಹೊಸ ಹಾಡನ್ನು ಬಿಡುಗಡೆ ಮಾಡಲಾಯಿತು. ಈ ಹಾಡಿಗೆ ರಾಘವೇಂದ್ರ ಕಾಮತ್ ಸಾಹಿತ್ಯ ರಚಿಸಿದ್ದಾರೆ. ಈ ಹಾಡನ್ನು ಅಂದು ಬಿಡುಗಡೆ ಮಾಡಲಾಯಿತು.