*ಒಂಬತ್ತು ರಸಗಳು, ಒಂದು ಕಥೆ ಮತ್ತು ಅಂತ್ಯ*
ಚಂದನವನದಲ್ಲಿ ಮೊದಲು ಎನ್ನುವಂತೆ ಒಂಬತ್ತು ರಸಗಳು, ಒಂದು ಕಥೆ ಮತ್ತು ಅಂತ್ಯ ಇರುವ *’ರೌಶಾಬಿ’* ಚಿತ್ರದಲ್ಲಿ ತೋರಿಸುವ ಪ್ರಯತ್ನ ಮಾಡಲಾಗಿದೆ. ಸ್ಪೂರ್ತಿ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ಹಾವೇರಿ ಮೂಲದ ಉದ್ಯಮಿ *ಶರಣಪ್ಪ ಅಂಗಡಿ ನಿರ್ಮಾಣ* ಮಾಡಿದ್ದಾರೆ. ನಟ *ಎಸ್.ಆರ್.ಪ್ರಮೋದ್ ಆಕ್ಷನ್ ಕಟ್* ಹೇಳಿರುವ ಆರನೇ ಚಿತ್ರವಾಗಿದೆ. ಪ್ರಚಾರದ ಕೊನೆ ಹಂತವಾಗಿ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ಶ್ರೀ ರೇಣುಕಾಂಬ ಸ್ಡುಡಿಯೋದಲ್ಲಿ ಅದ್ದೂರಿಯಾಗಿ ನಡೆಯಿತು. ಕರ್ನಾಟಕ ನಿರ್ದೇಶಕರ ಸಂಘದ ಅಧ್ಯಕ್ಷ ಎನ್ನಾರ್ಕೆ ವಿಶ್ವನಾಥ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ತಂಡಕ್ಕೆ ಶುಭ ಹಾರೈಸಿದರು.
ಹಿರಿಯ ಸಾಹಿತಿ ಯಂಡಮೂರಿ ವೀರೇಂದ್ರನಾಥ್ ಶಿಷ್ಯ ಕನ್ನಡಿಗ *ಆಯೂರು ಸಿನಿಮಾಕ್ಕೆ ಕಥೆ,ಚಿತ್ರಕಥೆ,ಸಂಭಾಷಣೆ, ಸಂಕಲನ ಜತೆಗೆ ನಾಯಕನಾಗಿ* ಅಭಿನಯಿಸಿದ್ದಾರೆ. ಮಂಜುಪ್ರೀತಿ, ರೇಖಾರಮೇಶ್ ನಾಯಕಿಯರು. ಎಸ್.ಆರ್.ಪ್ರಮೋದ್ ಮುಂತಾದವರು ಬಣ್ಣ ಹಚ್ಚಿದ್ದಾರೆ. ಛಾಯಾಗ್ರಹಣ ಮೈಸೂರು ಸೋಮು, ಹಿನ್ನಲೆ ಸಂಗೀತ ಕೆವಿನ್, ಡಿಐ ಕಿಶೋರ್ ಕುಮಾರ್ ಅಕ್ಕನ, ಸ್ಟುಡಿಯೋ ಅನಿಲ್.ಸಿ.ಆರ್ ಅವರದಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕರು, ಕಥೆಯಲ್ಲಿ ಒಂಬತ್ತು ರಸಗಳು ಇರುವುದರಿಂದ, ಪ್ರತಿಯೊಂದರಿಂದ ಒಂದು ಅಕ್ಷರ ತೆಗೆದುಕೊಂಡು ಶೀರ್ಷಿಕೆ ಇಡಲು ಚಿಂತನೆ ನಡೆಸಲಾಗಿತ್ತು. ಆದರೆ ಮಾರುದ್ದ ಬರುವ ಕಾರಣ ಸಿನಿಮಾದಲ್ಲಿ ಕಾಣಿಸಿಕೊಳ್ಳುವ ಮೂರು ಪ್ರಮುಖ ಪಾತ್ರಗಳ ಮೊದಲ ಅಕ್ಷರವನ್ನು ಬಳಸಿಕೊಂಡು ಟೈಟಲ್ ಇಡಲಾಗಿದೆ. ರೌಡಿ ಪಾತ್ರಕ್ಕೆ ರೌದ್ರ ಅಂತಲೂ, ಶಾಲಿನಿ ಹೆಸರನ್ನು ಶಾಂತ ಎಂದು, ಹಾಗಯೇ ಬಿಂದು ಅವಳನ್ನು ಭೀಬತ್ಸ್ಸ. ಹೀಗೆ ಮೂರು ಸೇರಿಸಿದರೆ ರೌಶಾಬಿ ಹೆಸರು ಬರುತ್ತದೆ. ಇದಕ್ಕೆ ಬೇರೆ ಅರ್ಥ ಏನಿಲ್ಲ. ಹೆಚ್ಚಿನ ವಿವರಕ್ಕೆ ಚಿತ್ರ ನೋಡಿದರೆ ತಿಳಿಯುತ್ತದೆ. ಮೈಸೂರು, ನೆಲಮಂಗಲ ರೆಸಾರ್ಟ್ವೊಂದರಲ್ಲಿ ಇಪ್ಪತ್ತು ದಿನಗಳ ಕಾಲ ಒಂದೇ ಹಂತದಲ್ಲಿ ಚಿತ್ರೀಕರಣ ಮುಗಿಸಲಾಗಿದೆ. ಕಲಾವಿದರು, ತಂತ್ರಜ್ಘರು ಸಹಕಾರ ನೀಡಿದ್ದರಿಂದಲೇ, ಕಳೆದ ವರ್ಷ ಶುರು ಮಾಡಿ ಇದೇ ತಿಂಗಳಲ್ಲಿ ಜನರಿಗೆ ತೋರಿಸಲಾಗುತ್ತಿದೆ ಎಂದು ಎಸ್.ಆರ್.ಪ್ರಮೋದ್ ಮಾಹಿತಿ ನೀಡಿದರು.
ನಂತರ ಮಾತನಾಡಿದ ಅಧ್ಯಕ್ಷರು, ಪ್ರಮೋದ್ ನಟನಾಗಲು ಬಂದವರು ನಿರ್ದೇಶಕರಾಗಿದ್ದಾರೆ. ತುಣುಕುಗಳು ಚೆನ್ನಾಗಿ ಮೂಡಿಬಂದಿದೆ. ಸರ್ಕಾರವು ೨೦೨೨ರಿಂದ ಸಹಾಯಧನ ಬಿಡುಗಡೆಯಾಗಿಲ್ಲ. ಹೊಸ ಕಮಿಟಿ ರಚನೆಯಾಗಿಲ್ಲ. ನಿರ್ಮಾಪಕರಿಂದ ಜಿಎಸ್ಟಿ ವಸೂಲು ಮಾಡುತ್ತಿದ್ದಾರೆ. ಆದರೆ ಅವರ ಚಿತ್ರಗಳಿಗೆ ಸಹಾಯಧನ ನೀಡುತ್ತಿಲ್ಲ. ಅಲ್ಲದೆ ಹೊಸ ಕಾನೂನು ತಂದಿದ್ದಾರೆ. ಇದರಿಂದ ನಿರ್ಮಾಪಕರಿಗೆ ಮತ್ತಷ್ಟು ಹೊರೆಯಾಗಿದೆ. ಇದರ ಕುರಿತಂತೆ ಈಗಾಗಲೇ ಕೇಂದ್ರ ವಾರ್ತಾ ಸಚಿವರಿಗೆ ಪತ್ರ ಬರೆಯಲಾಗಿದೆ. ಅಲ್ಲಿಂದ ಉತ್ತರ ಬರಬೇಕಾಗಿದೆ ಎಂದು ಎನ್ನಾರ್ಕೆ ವಿಶ್ವನಾಥ್ ಹೇಳಿದರು.
ಅಂದ ಹಾಗೆ ಸಿನಿಮಾವು ಇದೇ ತಿಂಗಳು ಚಿತ್ರಮಂದಿರಗಳಲ್ಲಿ ಲಗ್ಗೆ ಇಡಲಿದೆ.