Ayogya 2.Film News

Tuesday, August 11, 2026

 

ಅಯೋಗ್ಯನ ಜತೆ ಕ್ರೇಜಿ ಕಮಾಲ್

 

ಮೂರೇ ದಿನಕ್ಕೆ ಆರು ಕೋಟಿ ಕಲೆ ಹಾಕಿದ ಅಯೋಗ್ಯ 2

 

ರಾಜ್ಯಾದ್ಯಂತ ಅಯೋಗ್ಯನ ಭರ್ಜರಿ ಪ್ರದರ್ಶನ

 

ಸತೀಶ್ ನೀನಾಸಂ, ರಚಿತಾ ರಾಮ್ ಜೋಡಿಯ ಅಯೋಗ್ಯ 2 ಚಿತ್ರ ಕಳೆದ ವಾರ ತೆರೆಕಂಡಿತ್ತು. ಭರ್ಜರಿ ಓಪನಿಂಗ್ ಪಡೆದುಕೊಳ್ಳುವ ಮೂಲಕ ಬಾಕ್ಸಾಫೀಸ್‌ನಲ್ಲಿ ಜೋರಾಗಿಯೇ ಸದ್ದು ಮಾಡುತ್ತಿರುವ ‘ಅಯೋಗ್ಯ’ ಬೊಕ್ಕಸಕ್ಕೆ ಆರೂವರೆ ಕೋಟಿ (ಗ್ರಾಸ್) ಬಂದಿದೆ. ಅದೂ ಕೇವಲ ಮೂರೇ ದಿನಗಳಲ್ಲಿ ಎಂಬುದು ವಿಶೇಷ. ಶುಕ್ರವಾರದಿಂದಲೇ ತುಂಬಿದ ಪ್ರದರ್ಶನಗಳಲ್ಲಿ ಆಟ ಶುರು ಮಾಡಿದ ‘ಅಯೋಗ್ಯ’ನಿಗೆ ರಾಜ್ಯಾದ್ಯಂತ ಬಂಪರ್ ಕಲೆಕ್ಷನ್ ಕಲೆ ಹಾಕಿರುವುದು ಖುಷಿಯ ವಿಷಯ.

ಜನರು ಥಿಯೇಟರ್‌ನತ್ತ ಮುಖವೇ ಹಾಕುತ್ತಿಲ್ಲ ಎಂಬುವ ಹೊತ್ತಿನಲ್ಲಿ ಕೇವಲ ಮೂರು ದಿನಗಳಲ್ಲಿ ಕೋಟ್ಯಂತರ ರೂ. ಕಮಾಲ್ ಮಾಡಿದೆ. ಒಟ್ಟಾರೆ ಮೂರು ದಿನಗಳಲ್ಲಿ 2200 ಪ್ರದರ್ಶನ ಕಂಡಿರುವ ಈ ಸಿನಿಮಾ, ಸುಮಾರು ೪ ಲಕ್ಷದಷ್ಟು ಟಿಕೆಟ್‌ಗಳು ಬಿಕರಿಯಾಗಿವೆ. ಆ ಪೈಕಿ ಅಂದಾಜು 500 ಪ್ರದರ್ಶನಗಳು ಹೌಸ್‌ಫುಲ್ ಕಂಡಿವೆ, 1600ಕ್ಕೂ ಹೆಚ್ಚು ಶೋಗಳು ಫಾಸ್ಟ್ ಫಿಲ್ಲಿಂಗ್ ಆಗಿವೆ ಎಂಬುದು ಚಿತ್ರತಂಡದ ಒಪ್ಪಿಸುವ ಲೆಕ್ಕಾಚಾರ.

‘ವಾರಾಂತ್ಯದ ಜತೆಗೆ ಮಾಮೂಲಿ ದಿನಗಳಲ್ಲೂ ಉತ್ತಮ ಪ್ರದರ್ಶನ ಕಾಣುತ್ತಿದ್ದು, ಸಾಕಷ್ಟು ಮಲ್ಟಿಪ್ಲೆಕ್ಸ್ ಹಾಗೂ ಸಿಂಗಲ್ ಸ್ಕ್ರೀನ್‌ಗಳಲ್ಲಿ ಅರ್ಧಕ್ಕಿಂತ ಹೆಚ್ಚು ಜನ ಸಿನಿಮಾ ನೋಡಿ ಎಂಜಾಯ್ ಮಾಡುತ್ತಿದ್ದಾರೆ. ಅಲ್ಲದೇ ಮೂರು ದಿನಗಳ ಭರ್ಜರಿ ಪ್ರದರ್ಶನ ಕಂಡಿರುವ ಈ ಚಿತ್ರಕ್ಕೆ ನಾಲ್ಕನೇ ದಿನಕ್ಕೆ 20ಕ್ಕೂ ಹೆಚ್ಚು ಸ್ಕ್ರೀನ್‌ಗಳು ಹೆಚ್ಚಾಗಿರುವುದು ನಿಜವಾದ ಗೆಲುವಿನ ಸಂಕೇತ’ ಎನ್ನುತ್ತಾರೆ ನಿರ್ದೇಶಕ ಮಹೇಶ್ ಕುಮಾರ್.

ಅಯೋಗ್ಯನಿಗೆ ಕ್ರೇಜಿಸ್ಟಾರ್ ಸಾಥ್

ಸಿನಿಮಾ ಶುರುವಾದಾಗಿನಿಂದಲೂ ಈ ಸಿನಿಮಾದಲ್ಲಿ ರವಿಚಂದ್ರನ್ ನಟಿಸಿದ್ದಾರೆ ಎಂಬುದನ್ನು ಗೌಪ್ಯವಾಗಿರಿಸಿದ್ದ ಚಿತ್ರತಂಡ, ಚಿತ್ರಮಂದಿರದಲ್ಲಿ ಸಿನಿಮಾ ನೋಡುವ ಪ್ರೇಕ್ಷಕರಿಗೆ ಸರ್ಪೈಸ್ ನೀಡಿದೆ. ಈ ಚಿತ್ರದಲ್ಲಿ ಸತೀಶ್ ತಂದೆಯಾಗಿ ನಟಿಸಿರುವ ಕ್ರೇಜಿಸ್ಟಾರ್, ಸಿನಿಮಾದ ಪ್ರಮುಖ ಭಾಗದಲ್ಲಿ ಬಂದು ಅಚ್ಚರಿ ನೀಡುತ್ತಾರೆ.

 

ಕಚಗುಳಿಯಿಡುವ ಕಾಮಿಡಿ

ಸಾಧು ಕೋಕಿಲ, ತಬಲ ನಾಣಿ, ಸುಂದರ್ ರಾಜ್, ಶಿವರಾಜ್ ಕೆ.ಆರ್.ಪೇಟೆ, ಗಿಲ್ಲಿ ನಟ, ಅರುಣಾ ಬಾಲರಾಜ್, ಗಿರಿ ಶಿವಣ್ಣ ಹಾಗೂ ಮಂಜು ಪಾವಗಡ ಸೇರಿದಂತೆ ಅನೇಕರು ನಕ್ಕು ನಲಿಸುತ್ತಾರೆ. ಅದರಲ್ಲೂ ಸಾಧುಕೋಕಿಲ ಕಾಮಿಡಿಗೆ ಪ್ರೇಕ್ಷಕರು ಶಿಳ್ಳೆ, ಚಪ್ಪಾಳೆ ಮೂಲಕ ಸಂತಸ ವ್ಯಕ್ತಪಡಿಸುತ್ತಿದ್ದಾರೆ. ನಟಿ ಪ್ರಜ್ಞಾ ಹಾಡೊಂದರಲ್ಲಿ ಗಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ. ಇದರ ಜತೆಗೆ ಸತೀಶ್-ರವಿಶಂಕರ್ ಜುಗಲ್‌ಬಂದಿ ಸಹ ಚಿತ್ರದ ಹೈಲೈಟ್. 

 

ಎಸ್.ವಿ.ಸಿ ಫಿಲಂಸ್ ಬ್ಯಾನರ್ ಅಡಿಯಲ್ಲಿ ಎಂ.ಮುನೇಗೌಡ ನಿರ್ಮಿಸಿದ್ದಾರೆ. ಅರ್ಜುನ್ ಜನ್ಯ ಸಂಗೀತ ಸಂಯೋಜನೆ, ‘ಬಹದ್ದೂರ್’ ಚೇತನ್ ಕುಮಾರ್ ಸಾಹಿತ್ಯ, ಮಾಸ್ತಿ ಉಪ್ಪಾರಳ್ಳಿ ಸಂಭಾಷಣೆ, ‘ಶಾಖಾಹಾರಿ’ ಖ್ಯಾತಿಯ ವಿಶ್ವಜಿತ್ ರಾವ್ ಈ ಚಿತ್ರದ ಕ್ಯಾಮೆರಾಮನ್. ಸುರೇಶ್ ಆರ್ಮುಗಂ ಸಂಕಲನ, ಅರ್ಜುನ್ ರಾಜ್ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.

 

Copyright@2018 Chitralahari | All Rights Reserved. Photo Journalist K.S. Mokshendra,