September 21.Film News

Friday, May 08, 2026

 

*"ಸೆಪ್ಟೆಂಬರ್ 21" ಚಿತ್ರಕ್ಕೆ ರಿಯಲ್ ಸ್ಟಾರ್ ಉಪೇಂದ್ರ  ಸಾಥ್‌* .                                ‌‌‌         

‌‌‌                                                                                                                                                   *ಪ್ರಿಯಾಂಕ ಉಪೇಂದ್ರ ಅಭಿನಯದ ಹಾಗೂ ಕರೆನ್ ಕ್ರಿಷ್ಠಿ ಸುವರ್ಣ ನಿರ್ದೇಶನದ ಈ ಚಿತ್ರ ಮೇ 22 ರಂದು ತೆರೆಗೆ* .                                ‌‌‌                        ‌‌‌                                                                 

 

ತಮ್ಮ ಅಭಿನಯದ ಮೂಲಕ ಅಭಿಮಾನಿಗಳ ಮನ ಗೆದ್ದಿರುವ  ಪ್ರಿಯಾಂಕಾ ಉಪೇಂದ್ರ ಅವರು ನಟಿಸಿರುವ ಹಾಗೂ 22 ವರ್ಷದ ಕರೆನ್ ಕ್ರಿಷ್ಠಿ ಸುವರ್ಣ ನಿರ್ದೇಶಿಸಿರುವ  "ಸೆಪ್ಟೆಂಬರ್ 21" ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಚಿತ್ರ ಮೇ 22 ರಂದು ಬಿಡುಗಡೆಯಾಗುತ್ತಿದೆ. ಚಿತ್ರ ಬಿಡುಗಡೆಗೂ ಪೂರ್ವದಲ್ಲಿ ಆಯೋಜಿಸಲಾಗಿದ್ದ ಚಿತ್ರದ ಪತ್ರಿಕಾಗೋಷ್ಠಿಗೆ ರಿಯಲ್ ಸ್ಟಾರ್ ಉಪೇಂದ್ರ ಆಗಮಿಸಿ ಚಿತ್ರತಂಡಕ್ಕೆ ಶುಭ ಕೋರಿದರು. ಪತ್ರಕರ್ತ ಹಾಗೂ ನಿರ್ದೇಶಕ ಇಂದ್ರಜಿತ್ ಲಂಕೇಶ್ ಸಹ ಪತ್ರಿಕಾಗೋಷ್ಠಿಗೆ ಆಗಮಿಸಿದ್ದರು. ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು. 

                                              

 

"ಸೆಪ್ಟೆಂಬರ್ 21" ಹಿಂದಿ ಮತ್ತು ಕನ್ನಡ ಭಾಷೆಯಲ್ಲಿ ಏಕಕಾಲಕ್ಕೆ ಚಿತ್ರೀಕರಣಗೊಂಡಿದೆ. ಇಂದು ಟ್ರೇಲರ್ ಅನಾವರಣವಾಗಿದ್ದು, ಮೇ 22 ಕ್ಕೆ ಚಿತ್ರ ತೆರೆಗೆ ಬರಲಿದೆ. ಅದಕ್ಕೂ ಮುನ್ನ ಹೆಸರಾಂತ ಕಾನ್ಸ್ ಫಿಲಂ ಫೆಸ್ಟಿವಲ್ ನಲ್ಲಿ ನಮ್ಮ ಚಿತ್ರ ಮೇ 15 ರಂದು ಪ್ರದರ್ಶನವಾಗುತ್ತಿದೆ. ನನ್ನ ಮೊದಲ ನಿರ್ದೇಶನದ ಚಿತ್ರ ಕಾನ್ಸ್ ಫಿಲಂ ಫೆಸ್ಟಿವಲ್ ನಲ್ಲಿ ಪ್ರದರ್ಶನವಾಗುತ್ತಿರುವುದು ಖುಷಿಯಾಗಿದೆ. ಆಲ್ಝೈಮರ್ ಖಾಯಿಲೆ (Alzheimer's disease)ಸುತ್ತ ನಡೆಯುವ ಕಥೆ ಇದಾಗಿದ್ದು, "ರೋಗಿಗಿಂತ ಅವನ ಪಾಲನೆ ಮಾಡುವವರು ತೆಗೆದುಕೊಳ್ಳುವ ನಿರ್ಧಾರ ತುಂಬಾ ಮುಖ್ಯ "ಎಂಬುದು ಚಿತ್ರದ ಅಡಿಬರಹವಾಗಿದೆ. ಪ್ರಿಯಾಂಕ ಉಪೇಂದ್ರ ಅವರು ರೋಗಿಯನ್ನು ಶುಶ್ರೂಷೆ ಮಾಡುವವರ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಅವರು ಈವರೆಗೂ ಮಾಡಿರದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ನಿರ್ದೇಶಕಿ ಕರೆನ್ ಕ್ರಿಷ್ಠಿ ಸುವರ್ಣ ತಿಳಿಸಿದರು.                                                                   

ನನಗೆ ನಿರ್ದೇಶಕಿ ಕರೆನ್ ಕ್ರಿಷ್ಠಿ ಸುವರ್ಣ ಅವರು ಕಥೆ ಹೇಳಿದ ಪರಿ ಇಷ್ಟವಾಯಿತು. ನಾನು ಈವರೆಗೂ ಮಾಡಿರದ ಪಾತ್ರದಲ್ಲಿ ಅಭಿನಯಿಸಿದ್ದೇನೆ. ನಾನು ಕೂಡ ನಮ್ಮ ಕುಟುಂಬದಲ್ಲಿ ಆಲ್ಝೈಮರ್ ಖಾಯಿಲೆಯಿಂದ ಬಳಲುತ್ತಿರುವವರನ್ನು ಹತ್ತಿರದಿಂದ ನೋಡಿದ್ದೇನೆ.  ಆಲ್ಝೈಮರ್ ಖಾಯಿಲೆಯಿಂದ ಬಳಲುತ್ತಿರುವ ರೋಗಿ ಹಾಗೂ ರೋಗಿಯನ್ನು ಶುಶ್ರೂಷೆ ಮಾಡುವವರ ಸುತ್ತ ನಡೆಯುವ ಕಥಾಹಂದರ ಈ ಚಿತ್ರ ಹೊಂದಿದೆ. ನಮ್ಮ ಚಿತ್ರಕ್ಕೆ ಸಪೋರ್ಟ್ ಮಾಡಲು ಬಂದಿರುವ ನನ್ನ ಪತಿ ಉಪೇಂದ್ರ ಅವರಿಗೆ ಹಾಗೂ ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರಿಗೆ ಧನ್ಯವಾದ ಎಂದರು ನಟಿ ಪ್ರಿಯಾಂಕ ಉಪೇಂದ್ರ.                    ‌    ‌  ‌        ‌ ‌              ‌‌‌                                               

 

ಆಲ್ಝೈಮರ್ ಖಾಯಿಲೆಯಿಂದ ಬಳಲುತ್ತಿರುವ ರೋಗಿಯ ಪಾತ್ರದಲ್ಲಿ ಅಭಿನಯಿಸಿರುವುದಾಗಿ ನಟ ಪ್ರವೀಣ್ ಸಿಂಗ್ ಸಿಸೋಡಿಯಾ ಹೇಳಿದರು. ಕಥೆಯ ಕುರಿತು ಕಥೆಗಾರ ರಾಜಶೇಖರ್ ಹಾಗೂ  ಹಾಡುಗಳ ಬಗ್ಗೆ ಸಂಗೀತ ನಿರ್ದೇಶಕ ವಿನಯ್ ಚಂದ್ರ ಮಾಹಿತಿ ನೀಡಿದರು.  ನಿರ್ಮಾಪಕರಾದ ವಿಜಯ್ ಚೌಧರಿ, ಶ್ರೀನಿವಾಸ್ ಬೆಟ್ಟದಪುರ, ರಮೇಶ್ ಭಂಡಾರಿ ಹಾಗೂ ಅಭಿಷೇಕ್ ಗೌತಮ್, ಅಜಿತ್ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

 

Copyright@2018 Chitralahari | All Rights Reserved. Photo Journalist K.S. Mokshendra,