Lockdown.Film News

Monday, May 04, 2026

 

*ಲಾಕ್‌ಡೌನ್ ನೋವು ನಲಿವು*

 

       ಹೊಸ ಪ್ರತಿಭೆಗಳೇ ಸೇರಿಕೊಂಡು *’ಲಾಕ್‌ಡೌನ್’* ಎನ್ನುವ ಚಿತ್ರವನ್ನು ಸಿದ್ದಪಡಿಸಿದ್ದಾರೆ. ಅಭಿನವ ಪ್ರೊಡಕ್ಷನ್ ಅಡಿಯಲ್ಲಿ *ಮಂಜು ಮುದ್ಗಲ್ ನಿರ್ಮಾಣ ಮಾಡುವ ಜತೆಗೆ ಮಹತ್ವದ ಪಾತ್ರಕ್ಕೆ* ಬಣ್ಣ ಹಚ್ಚಿದ್ದಾರೆ. ಹಲವು ನಿರ್ದೇಶಕರ ಬಳಿ ಕೆಲಸ ಮಾಡಿರುವ *ಜಾವೇದ್ ತಿಪ್ಪನಹಟ್ಟಿ ಸಿನಿಮಾಕ್ಕೆ ಚಿತ್ರಕಥೆ, ಸಾಹಿತ್ಯ, ಸಂಗೀತ ಸಂಯೋಜಿಸಿ ಆಕ್ಷನ್ ಕಟ್* ಹೇಳಿದ್ದಾರೆ. ಪ್ರಚಾರದ ಮೊದಲ ಹಂತವಾಗಿ ಮೊನ್ನೆಯಷ್ಟೇ ಟ್ರೇಲರ್ ಹಾಗೂ ಸಿರಿ ಮ್ಯೂಸಿಕ್ ಹೊರತಂದಿರುವ ಹಾಡುಗಳ ಬಿಡುಗಡೆ ಕಾರ್ಯಕ್ರಮ ಶ್ರೀ ರೇಣುಕಾಂಬ ಸ್ಟುಡಿಯೋದಲ್ಲಿ ಅದ್ದೂರಿಯಾಗಿ ನಡೆಯಿತು.

 

       ಬೆಂಗಳೂರಿನ ವಿಜಯ್ ವಿಘ್ನೇಶ್ ನಾಯಕ. ದಾವಣಗೆರೆ ಮೂಲದ ವಾಣಿಶ್ರೀ ಶ್ರೀನಿವಾಸ್ ನಾಯಕಿ. ಇವರೊಂದಿಗೆ ಶ್ರಾವಣಿ, ಅಶ್ವಿನಿಮುದ್ಗಲ್, ಮಮತಾ ಹಾಗೂ ರೀಲ್ಸ್ ಕರ್ನಾಟಕ ಜೋಡಿ ಖ್ಯಾತರಾದ ಗೋವಿಂದರಾಜು-ವೈಲಾ ಮುಂತಾದವರು ನಟಿಸಿದ್ದಾರೆ. ಶರಣಪ್ಪ ಸುಗ್ಗನಹಳ್ಳಿ ಛಾಯಾಗ್ರಹಣ, ಶಿವರಾಜ್ ಮೆಹೂ ಸಂಕಲನ ಚಿತ್ರಕ್ಕಿದೆ.

       ನಂತರ ಮಾತನಾಡಿದ ನಿರ್ದೇಶಕರು, ವಿಶ್ವವೇ ನಲುಗಿದ ಲಾಕ್‌ಡೌನ್ ಸಂದರ್ಭದಲ್ಲಿ ಹಲವರಿಗೆ ನೋವು ತಂದರೆ ಕೆಲವರಿಗೆ ನಲಿವು ತಂದುಕೊಟ್ಟಿದೆ. ಅದಕ್ಕೆ ಟ್ಯಾಗ್ ಲೈನ್‌ದಲ್ಲಿ ವಿಷಾದ ಅಂಡ್ ರಂಜನೆ ಎಂದು ಹೇಳಲಾಗಿದೆ. ಅದರಲ್ಲೂ ಬಳ್ಳಾರಿಯಲ್ಲಿ ಅಂದು ಒಂದಷ್ಟು ಕಹಿ ಘಟನೆಗಳು ನಡೆದುದನ್ನು ಚಿತ್ರಕತೆಗೆ ಅಳವಡಿಸಿಕೊಳ್ಳಲಾಗಿದೆ. ಜತೆಗೆ ಯುವ ಪ್ರೇಮಿಗಳು ಹಾಗೂ ಮಧ್ಯ ವಯಸ್ಕ ದಂಪತಿಗಳ ಪ್ರೀತಿಯನ್ನು ಹಾಸ್ಯದೊಂದಿಗೆ ತೋರಿಸಲಾಗಿದೆ. ಸನ್ನವೇಶಗಳು ವಾಸ್ತವ. ಆದರೆ ಕಥೆ ಕಾಲ್ಪನಿಕವಾಗಿದೆ. ಉತ್ತರ ಕರ್ನಾಟಕ ಭಾಷೆಯನ್ನು ಬಳಸಲಾಗಿದೆ. ಒಂದಷ್ಟು ವಿಷಯಗಳು ಜನರಿಗೆ ಗೊತ್ತಿರುವುದಿಲ್ಲ. ಅದನ್ನು  ತಿಳಿಯಬೇಕಾದರೆ ನಮ್ಮ ಸಿನಿಮಾ ನೋಡಬೇಕು ಎನ್ನುತ್ತಾರೆ ಜಾವೇದ್ ತಿಪ್ಪನಹಟ್ಟಿ.

 

       ಅಭಿನಯದ ಅವಕಾಶಕ್ಕಾಗಿ ಎಲ್ಲರ ಬಳಿ ಹೋಗುತ್ತಿದ್ದೆ. ಅವರು ಕೊಡುತ್ತಿದ್ದ ಅಸಹಕಾರದಿಂದ ನಾನೇ ಏಕೆ ಚಿತ್ರ ಮಾಡಬಾರದು ಎಂದು ಯೋಚಿಸಿದ್ದೆ, ಇಲ್ಲಿಯತನಕ ತಂದು ನಿಲ್ಲಿಸಿದೆ. ಎರಡು ಟ್ರ್ಯಾಕ್‌ದಲ್ಲಿ ಲವ್ ಸ್ಟೋರಿ ಇರಲಿದ್ದು, ಒಂದರಲ್ಲಿ ನಾನು ಕಾಣಿಸಿಕೊಂಡಿದ್ದೇನೆ. ದುಡಿದ ಹಣವನ್ನು ಸಿನಿಮಾಕ್ಕೆ ಖರ್ಚು ಮಾಡಿದ್ದೇನೆ. ಮಾಧ್ಯಮದವರು ಸಹಕಾರ ಕೊಡಬೇಕೆಂದು ಮಂಜು ಮುದ್ಗಲ್ ಕೋರಿಕೊಂಡರು.

 

       ಕೊಪ್ಪಳ, ಉಪ್ಪಿನ ಬೆಟಗೇರಿ ಸುತ್ತಮುತ್ತ ಹಳ್ಳಿಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಅಂದುಕೊಂಡಂತೆ ಆದರೆ, ಇದೇ ತಿಂಗಳು ತೆರೆಗೆ ತರಲು ಜಯದೇವ ಫಿಲಂಸ್ ಯೋಜನೆ ರೂಪಿಸಿಕೊಂಡಿದೆ.

 

Copyright@2018 Chitralahari | All Rights Reserved. Photo Journalist K.S. Mokshendra,