Mruthyudevathe.News

Monday, May 04, 2026

 

*ಮೃತ್ಯುದೇವತೆಯ ’ದೇವಿ’* *ಹಾಡು*

 *ಓಂ ಸಾಯಿಪ್ರಕಾಶ್* *ಬಿಡುಗಡೆ*

 

   ಸಮಾಜದಲ್ಲಿ ಪ್ರತಿನಿತ್ಯ ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿರುವ ಅನ್ಯಾಯ, ಅತ್ಯಾಚಾರ ಪ್ರಕರಣಗಳು, ಹೀಗೆ ಟ್ರ್ಯಾಪ್ ಗೆ ಒಳಗಾದ ಮೂರು ಹೆಣ್ಣು ಮಕ್ಕಳು ಹೇಗ ಅದರಿಂದ ಹೊರಗೆ ಬರುತ್ತಾರೆ ಎಂಬ ಮಹಿಳಾಪ್ರಧಾನ ಕಥಾಹಂದರ ಇಟ್ಟುಕೊಂಡು ನವೀನ್ ಮಹದೇವ್ ಅವರು ನಿರ್ದೇಶಿಸಿರುವ ಚಿತ್ರ ಮೃತ್ಯುದೇವತೆ. ಈ ಚಿತ್ರದ ಮುಖ್ಯ ಪಾತ್ರಗಳಲ್ಲಿ ಹಿರಿಯನಟಿ ವಿನಯಾ ಪ್ರಸಾದ್, ಹಿಮಶ್ರೀ, ಸಾರಿಕಾ ರಾವ್ ಹಾಗೂ ಡಯಾನಾ ಅಭಿನಯಿಸಿದ್ದಾರೆ.

ಇತ್ತೀಚೆಗೆ ಈ ಚಿತ್ರದ ದೇವಿ ಹಾಡನ್ನು ಹಿರಿಯ ನಿರ್ದೇಶಕ ಓಂ ಸಾಯಿ ಪ್ರಕಾಶ್ ಬಿಡುಗಡೆ ಮಾಡಿದರು.

   ವೇದಿಕೆಯಲ್ಲಿ ಮಾತನಾಡಿದ ಓಂ ಸಾಯಿಪ್ರಕಾಶ್ ಈ ಚಿತ್ರದ ಹೆಸರು ಕೇಳಿದ ಕೂಡಲೇ ಮಹಿಳಾ ಪ್ರಧಾನ ಚಿತ್ರ ಅನ್ಸುತ್ತೆ. ಒಂದು ರಿವೆಂಜ್ ಕಾಣುತ್ತೆ. ಸಾಂಗ್, ಕೊರಿಯಾಗ್ರಫಿ ಚೆನ್ನಾಗಿದೆ. ನಾಗದೇವತೆ, ಗ್ರಾಮದೇವತೆ ಹೀಗೆ ಹಲವಾರು ಅಮ್ಮನ  ಭಕ್ತಿಪ್ರದಾನ ಚಿತ್ರಗಳನ್ನು ಮಾಡಿದ್ದೇನೆ. ಸಿನಿಮಾ ನೋಡಿದ ತಕ್ಷಣ ಇದು ಸಾಯಿಪ್ರಕಾಶ್ ಚಿತ್ರ ಎಂದು ಗುರುತಿಸ್ತಿದ್ದರು. ದೇವಿ ಗೆಟಪ್ ನಲ್ಲಿ ನಾಯಕಿ ತುಂಬಾ ಚೆನ್ನಾಗಿ ಅಭಿನಯಿಸಿದ್ದಾರೆ. ಒಳ್ಳೆಯದಾಗಲಿ ಎಂದರು.

    ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಬರೆದು ನಿರ್ದೇಶನದ ಜೊತೆಗೆ ನಟನೆ ಕೂಡ ಮಾಡಿರುವ ನವೀನ್ ಮಹದೇವ್  ಮಾತನಾಡುತ್ತವ ’ಇದೊಂದು ಮಹಿಳಾ ಪ್ರಧಾನ ಕಥಾಹಂದರ ಇರುವ ಚಿತ್ರ. ಹೆಣ್ಣುಮಕ್ಕಳು ಅದೆಷ್ಟೇ  ಬುದ್ದಿವಂತೆ, ಚತುರಳಾಗಿದ್ದರೂ ದುರುಳರು ಅವರನ್ನು ಹೇಗೆಲ್ಲಾ  ಟ್ರಾಪ್ ಮಾಡುತ್ತಾರೆ.

 ಸಹನಾಮಯಿ ಹೆಣ್ಣಿನ ಸಹನೆಯ ಕಟ್ಟಿ ಒಡೆದಾಗ ಏನಾಗುತ್ತದೆ ಎಂಬುದನ್ನು  ಚಿತ್ರದಲ್ಲಿ ಹೇಳಿದ್ದೇವೆ. ಸ್ವಲ್ಪ ಹಾರರ್ ಟಚ್ ಕೂಡ ಇದೆ, ಕೆಲವು ಸಂಪ್ರದಾಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಒಳ್ಳೆಯದು, ದುರುಳರ ಅಟ್ಟಹಾಸ ಅತಿರೇಕಕ್ಕೆ ಹೋದಾಗ ಆ ದೇವತೆಯೇ ಬರಬೇಕಾಗುತ್ತದೆ ಎಂದು ಈ ಹಾಡಲ್ಲಿ ತೋರಿಸಿದ್ದೇವೆ‌. ಚಿತ್ರವೀಗ ಸೆನ್ಸಾರ್ ಹಂತದಲ್ಲಿದ್ದು ಇದೇ ತಿಂಗಳ 22 ರಂದು  ರಿಲೀಸ್ ಮಾಡುವ ಯೋಜನೆಯಿದೆ ಎಂದು ಹೇಳಿದರು.

   ಕೋ ಡೈರೆಕ್ಟರ್ ದೇವು ಮಾತನಾಡಿ ಚಿತ್ರದ ಕಥೆಯಲ್ಲಿ ಸ್ವಲ್ಪಭಾಗ ಹಾರರ್ ಕೂಡ ಇದ್ದು ಶೇ.೨೦ರಷ್ಟು  ಗ್ರಾಫಿಕ್ಸ್ ಇದೆ ಎಂದರು.

  ನಾಯಕಿ  ಹಿಮಶ್ರೀ ಮಾತನಾಡಿ ’ನಾನಿಲ್ಲಿ ಮಲೆನಾಡಿನ ಹಳ್ಳಿ ಹುಡುಗಿ ಸೌಮ್ಯ ಎಂಬ ಪಾತ್ರ ಮಾಡಿದ್ದೇನೆ. ಆಕೆ ಏನೂ ಗೊತ್ತಿಲ್ಲದ ಮುಗ್ಧ ಹುಡುಗಿ. ಇನ್ನೊಂದು ಶಕ್ತಿ ನನ್ನಲ್ಲಿ ಸೇರಿದಾಗ ಹೋರಾಟ ಮಾಡುತ್ತೇನೆ. ವಿನಯಪ್ರಸಾದ್ ಅವರ ಜತೆ ಅಭಿನಯಿಸಿದ್ದು ದೊಡ್ಡ ಅನುಭವ ಎಂದರು.

    ಅಣ್ಣಯ್ಯ ಖ್ಯಾತಿಯ ಮಾಹೀನ್ ಮಾತನಾಡಿ ನಾನು ಹಣವೇ ಎಲ್ಲಾ ಅಂತ ಮೆರೆಯುವ ಶ್ರೀಮಂತ ಹುಡುಗನ ಪಾತ್ರ ಮಾಡಿದ್ದೇನೆ. ಕೆಟ್ಟದಾರಿ ಹಿಡಿದ ನನ್ನ ಪರಿಣಾಮ ಏನಾಗುತ್ತೆ ಎಂದು ನಿರ್ದೇಶಕರು ತೋರಿಸಿದ್ದಾರೆ ಎಂದರು. ನೃತ್ಯನಿರ್ದೇಶಕ ರಘು, ಗಾಯಕಿ ವೈಷ್ಣವಿ ಚಿತ್ರದ ಬಗ್ಗೆ ಮಾತನಾಡಿದರು.

     ಮೃತ್ಯುದೇವತೆ ಚಿತ್ರವನ್ನು ನವೀನ್‍ ಮಹದೇವ್‍ ಅವರ ಪತ್ನಿ ಸರಸ್ವತಿ ಅವರು ವರ್ಷಿತಾ ಪ್ರೊಡಕ್ಷನ್ಸ್ ಬ್ಯಾನರ್ ಅಡಿ ನಿರ್ಮಿಸಿದ್ದಾರೆ.

 ಈ ಚಿತ್ರಕ್ಕೆ ಅನಿರುಧ್ ಅವರ ಛಾಯಾಗ್ರಹಣ, ಶಿವಪ್ರಸಾದ್ ಅವರ ಸಂಗೀತ ನಿರ್ದೇಶನ, ರಘು ಅವರ ನೃತ್ಯ ನಿರ್ದೇಶನ, ಅಲ್ಟಿಮೇಟ್‍ ಶಿವು ಹಾಗೂ ಚಿಟ್ಟ ಜಾಧವ್‍ ಅವರ ಸಾಹಸ ನಿರ್ದೇಶನ ಮತ್ತು ಮಂಜು ವಿಕ್ರಂ ಅವರ ಸಂಕಲನ, ಗಣೇಶ್ ಅವರ ಕಲಾನಿರ್ದೇಶನವಿದೆ. ಸೂರ್ಯ, ಪವನ್ ಶೆಟ್ಟಿ, ವರ್ಷಿತಾ ಇತರ ಪಾತ್ರಗಳಲ್ಲಿದ್ದಾರೆ.

 

Copyright@2018 Chitralahari | All Rights Reserved. Photo Journalist K.S. Mokshendra,