Goggayya.Film News

Thursday, March 26, 2026

 

*ಏಪ್ರಿಲ್ 10ರಂದು "ಗೊಗ್ಗಯ್ಯ" ನ ಆಗಮನ* .                        

 

 *ಚಿಕ್ಕ ಮಕ್ಕಳಿಗೆ ಹೆದರಿಸುವ ಪದವೇ ಈಗ ಸಿನಿಮಾ ಶೀರ್ಷಿಕೆ** .

 

ಸಾಮಾನ್ಯವಾಗಿ ಚಿಕ್ಕಮಕ್ಕಳು ಊಟ ಮಾಡದಿದ್ದರೆ, ತಾಯಿ ಹೇಳುವ ಪದವೇ ಊಟ ಮಾಡು ಕಂದ. ಇಲ್ಲದಿದ್ದರೆ "ಗೊಗ್ಗಯ್ಯ" ಬರುತ್ತಾನೆ ಅಂತ. ಈಗ "ಗೊಗ್ಗಯ್ಯ" ಎಂಬ ಶೀರ್ಷಿಕೆಯಲ್ಲೇ ಸಿನಿಮಾ ನಿರ್ಮಾಣವಾಗಿದ್ದು ತೆರೆಗೆ ಬರಲು ಸಿದ್ದವಾಗಿದೆ. ಚಿತ್ರ ಏಪ್ರಿಲ್ 10 ರಂದು ತೆರೆಗೆ ಬರುತ್ತಿದೆ. ಇತ್ತೀಚೆಗೆ ಈ ಚಿತ್ರದ ಹಾಡು ಬಿಡುಗಡೆ ಸಮಾರಂಭ ಅದ್ದೂರಿಯಾಗಿ ನೆರವೇರಿತು. ಹಾಡು ಬಿಡುಗಡೆ ಸಮಾರಂಭದ ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.

 

 ನಾನು ಸಾಕಷ್ಟು ಚಿತ್ರಗಳಿಗೆ ಸಹ ನಿರ್ದೇಶಕನಾಗಿ ಹಾಗೂ ನಿರ್ದೇಶಕನಾಗಿಯೂ  ಕಾರ್ಯ ನಿರ್ವಹಿಸಿದ್ದೇನೆ. ಪ್ರಸ್ತುತ "ಗೊಗ್ಗಯ್ಯ" ಚಿತ್ರವನ್ನು ನಿರ್ದೇಶಿಸಿದ್ದೇನೆ. ವಂದನ ಎಂಟರ್ ಪ್ರೈಸಸ್ ಲಾಂಛನದಲ್ಲಿ ರಾಧಾ ಜೆ ಅವರು ನಿರ್ಮಾಣ ಮಾಡಿರುವ ಈ ಚಿತ್ರಕ್ಕೆ ನಾನೇ ಕಥೆ ಬರೆದಿದ್ದೇನೆ. ಸಂಗೀತ ನಿರ್ದೇಶನದ ಜೊತೆಗೆ ನಾಯಕನಾಗಿಯೂ ಅಭಿನಯಿಸಿದ್ದೇನೆ. ತನ್ಮಯ್ ಎಸ್ ಆನಂದ್ ಕುಮಾರ್ ಅವರು ಚಿತ್ರಕಥೆ, ಗೀತರಚನೆ ಹಾಗೂ ಸಂಭಾಷಣೆ ಬರೆದು ನೃತ್ಯ ನಿರ್ದೇಶನ ಮಾಡಿದ್ದರೆ. 

ಈ ಚಿತ್ರದಲ್ಲಿ ಮೂರು ಹಾಡುಗಳಿದ್ದು,  ರಾಮನವಮಿಯ ಪ್ರಯುಕ್ತ "ನೀ ಹೆದರದಿರು ಕಂದ" ಎಂಬ ಹನುಮಂತನ ಕುರಿತಾದ ಹಾಡು ಬಿಡುಗಡೆ ಮಾಡಿದ್ದೇವೆ. ಕೈಲಾಶ್ ಖೇರ್ ಅವರು ಹಾಡಿರುವ ಈ ಹಾಡನ್ನು ತನ್ಮಯ್ ಎಸ್ ಆನಂದ್ ಕುಮಾರ್ ಬರೆದಿದ್ದಾರೆ. ಸಿರಿ ಮ್ಯೂಸಿಕ್ ಯೂಟ್ಯೂಬ್ ಚಾನಲ್ ನಲ್ಲಿ ಈ ಹಾಡು ಬಿಡುಗಡೆಯಾಗಿದೆ. ಕಾಮಿಡಿ, ಹಾರಾರ್ ಹಾಗೂ ಸೆಂಟಿಮೆಂಟ್ ಕಥಾಹಂದರ ಹೊಂದಿರುವ ಈ ಚಿತ್ರ ಏಪ್ರಿಲ್ 10 ರಂದು ಬಿಡುಗಡೆಯಾಗುತ್ತಿದೆ. ನಮ್ಮ ಚಿತ್ರಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ನಿರ್ದೇಶಕ ಹಾಗೂ ನಾಯಕ ವಸಂತ್.

 

 ಸಾಮಾನ್ಯವಾಗಿ ತಾಯಂದಿರು ಮಕ್ಕಳು ಊಟ ಮಾಡಿದಿದ್ದಾಗ ಬಳಸುವ ಮೊದಲ ಪದವೇ "ಗೊಗ್ಗಯ್ಯ" ಅಂತ. ನಾನೇ ನಿರ್ದೇಶಕರಿಗೆ ಈ ಶೀರ್ಷಿಕೆ ಕೊಟ್ಟೆ. ಶೀರ್ಷಿಕೆಗೆ ಕಥೆ ಪೂರಕವಾಗಿದೆ ಎಂದು ನಿರ್ಮಾಪಕಿ ರಾಧಾ ತಿಳಿಸಿದರು.

 

 ನಾಯಕಿ ಸ್ನೇಹ, ನಟರಾದ ಕೌರವ ವೆಂಕಟೇಶ್, ವೈಭವ ನಾಗರಾಜ್, ಸಿರಿ ಮ್ಯೂಸಿಕ್ ನ ಸುರೇಶ್ ಚಿಕ್ಕಣ್ಣ ಹಾಗೂ ಚಿತ್ರಕಥೆ, ಸಂಭಾಷಣೆ ಬರೆದು ಗೀತರಚನೆ ಮಾಡಿ, ನಿರ್ಮಾಣದ ಮೇಲ್ವಿಚಾರಣೆಯನ್ನು ಹೊತ್ತಿರುವ ತನ್ಮಯ್ ಎಸ್ ಆನಂದ್ ಕುಮಾರ್ ಸೇರಿದಂತೆ ಚಿತ್ರತಂಡದ ಅನೇಕ ಸದಸ್ಯರು "ಗೊಗ್ಗಯ್ಯ" ಚಿತ್ರದ ಕುರಿತು ಮಾತನಾಡಿದರು.

 

Copyright@2018 Chitralahari | All Rights Reserved. Photo Journalist K.S. Mokshendra,