Urabba.Film News

Tuesday, June 09, 2026

 

"ಊರಬ್ಬ"ದಲ್ಲಿ ಜಾತ್ರೆಯ ನೈಜದೃಶ್ಯ

ಶಾಸಕ ರಂಗನಾಥ್ ರಿಂದ 

ಟ್ರೈಲರ್ ಬಿಡುಗಡೆ

 

     ಮಾಗಡಿ ತಾಲ್ಲೂಕಿನ ಸುಪ್ರಸಿದ್ದ ಉಜ್ಜಿನಿ ಚೌಡೇಶ್ವರಿ ಜಾತ್ರೆ, ಅದರ ಹಿನ್ನೆಲೆಯಲ್ಲಿ ನಡೆಯುವ ಕಥೆ ಇಟ್ಟುಕೊಂಡು ನಿರ್ದೇಶಕ ಲಕ್ಕಿ ಶಂಕರ್  "ಊರಬ್ಬ" ಎಂಬ ಚಿತ್ರವನ್ನು ಕಟ್ಟಿಕೊಟ್ಟಿದ್ದಾರೆ. ಒನ್ಸ್ ಮೋರ್ ಕೌರವ ಖ್ಯಾತಿಯ ನರೇಶ್ ಗೌಡ, ತನಿಷಾ ಕುಪ್ಪಂಡ, ಪಾಯಲ್ ಚಂಗಪ್ಪ, ಸಿದ್ದು ಮೂಲಿಮನಿ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭ ಇತ್ತೀಚೆಗೆ ನಡೆಯಿತು. ಕುಣಿಗಲ್ ಶಾಸಕ ರಂಗನಾಥ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಟ್ರೈಲರ್ ಲಾಚ್ ಮಾಡಿ ಶುಭ ಹಾರೈಸಿದರು.

    ಜಾತ್ರೆಯ ನೈಜ ದೃಶ್ಯಗಳನ್ನು ಎಂ.ಡಿ.ಶ್ರೀಧರ್, ಹೆಚ್.ವಾಸು, ಎವಿ ಕೃಷ್ಣಕುಮಾರ್, ಬಾಹುಬಲಿ, ಈಶ್ವರ್ ಹೀಗೆ 5 ಜನ ಸೇರಿ 8 ಕ್ಯಾಮೆರಾ ಬಳಸಿಕೊಂಡು  ಜಾತ್ರೆ ದೃಶ್ಯವನ್ನು ಸೆರೆಹಿಡಿದಿದ್ದಾರೆ.

    ವೇದಿಕೆಯಲ್ಲಿ ಹೆಚ್. ವಾಸು ಮಾತನಾಡಿ ನಾವೆಲ್ಲ ಗೌಡ್ರ ಊರಿಗೆ ಹಬ್ಬಕ್ಕೆ ಅಂತಾನೇ ಹೋಗ್ತಿದ್ದೆವು. ಅಲ್ಲಿ ನಡೆಯುವ ಒಂದಷ್ಟು ತಪ್ಪುಗಳನ್ನು ಇಟ್ಕೊಂಡು ಸಿನಿಮಾ ಮಾಡಿದ್ದೇವೆ. ಎಲ್ಲರೂ ಸೇರಿ ಡೈಲಾಗ್ ಬರೆದಿದ್ದೇವೆ ಎಂದರು.

  ಈ ಸಂದರ್ಭದಲ್ಲಿ ಮಾತನಾಡಿದ ಲಕ್ಕಿ ಶಂಕರ್ ಇದು ನಾನು ಮಾಡಿದ್ದಲ್ಲ, ಆ ಚೌಡೇಶ್ವರಿಯೇ ಮಾಡಿಸಿದ್ದು. ಆಕೆಯ ಶಕ್ತಿಯನ್ನು ನಂಬಿ ಈ ಚಿತ್ರ ಮಾಡಿದ್ದೇನೆ. ಹಿಂದಿನಿಂದ ಕಂಟೆಂಟ್ ಬೇಸ್ ಸಿನಿಮಾಗಳನ್ನೇ ಮಾಡಿಕೊಂಡು ಬಂದಿದ್ದೇನೆ. ಏನಾದರೂ ವರೈಟಿ ಮಾಡೋಣ ಎಂದಾಗ ಈ ಕಾನ್ಸೆಪ್ಟ್ ಹೊಳೆಯಿತು. ಶೂಟಿಂಗ್ ಮಾಡುವಾಗ ಊರ ಜನರ ಸಹಕಾರ ತುಂಬಾ ಇತ್ತು. ಈ ಥರದ ಪ್ರಾಜೆಕ್ಟ್ ಮಾಡಲು ನಿರ್ಮಾಪಕ ನರೇಶ್ ಗೌಡ್ರೂ ಸಾಥ್ ನೀಡಿದರು. ಉಗಾದಿ ಹಬ್ಬದ 15 ದಿನಗಳ ನಂತರ ಈ ಜಾತ್ರೆ ಪ್ರಾರಂಭವಾಗುತ್ತೆ. ಡೈಲಾಗ್ ಬರೆದ ವಾಸು, ಶ್ರೀಧರ್ ಅವರೇ ನಿಜವಾದ ಡೈರೆಕ್ಟರ್, ಅವರ ಸಲಹೆ ತಗೊಂಡು ಇಡೀ ಜಾತ್ರೆಯನ್ನು ಲೈವ್ ಆಗಿ ಶೂಟ್ ಮಾಡಿದ್ದೇವೆ. ಈ ಪ್ರಯತ್ನ ಭಾರತದಲ್ಲೇ ಮೊದಲು. ಸಾವಿರಾರು ವರ್ಷಗಳ ಹಿಂದೆ ನಡೆದ ಇತಿಹಾಸವನ್ನು ತಿಳಿದುಕೊಂಡು ಸಿನಿಮಾ ಮಾಡಿದ್ದೇನೆ. ಸೆನ್ಸಾರ್ ನಲ್ಲಿ ಸ್ವಲ್ಪ ತೊಂದರೆ ಆದರೂ, ಸರಿ ಮಾಡಿಕೊಂಡೆವು  ಎಂದರು.

    ಪ್ರಮುಖ ಪಾತ್ರಧಾರಿ ಹಾಗೂ ನಿರ್ಮಾಪಕರಾದ ನರೇಶ್ ಗೌಡ್ರು ಮಾತನಾಡಿ ಈ ಸಿನಿಮಾ ಆಗಲು ಮುಖ್ಯ ಕಾರಣ ಲಕ್ಕಿ ಶಂಕರ್, ಸಿನಿಮಾನೇ ಮಾಡಬಾರದು ಎಂದುಕೊಂಡಿದ್ದೆ. ಈಗ ಮಾಡಿದ್ದೇನೆ. ಮಂಗಳವಾರ ಚೌಡೇಶ್ವರಿ ದೇವಿಯ ವಾರ, ಚಿತ್ರದ ಎಲ್ಲ ಕೆಲಸಗಳು ಇದೇ ದಿನ ಆಗುತ್ತಿವೆ. ಆರು ಜನ ದಲಿತರಿಗೆ ಜನಿವಾರ ಹಾಕಿಸಿ ಅಗ್ನಿಕುಂಡ ದಾಟಿಸುತ್ತಾರೆ. ಈ ಚಿತ್ರದಲ್ಲಿ  30 ರಿಂದ 40 ಜನ‌ ಕಲಾವಿದರು ಆ್ಯಕ್ಟ್ ಮಾಡಿದ್ದಾರೆ. ನಾನೂ ಒಂದು ಪಾತ್ರ ಮಾಡಿದ್ದೇನೆ. ಚಿತ್ರಕ್ಕೆ ತುಂಬಾ ಜನ ತಂತ್ರಜ್ಞರು ಕೈಜೋಡಿಸಿದ್ದಾರೆ. ನಿಡಸಾಲೆ ಪುಟ್ಟಸ್ವಾಮಯ್ಯ, ಮಿಮಿಕ್ರಿ ಗೋಪಿ, ಸೇರಿದಂತೆ ಬಹಳಷ್ಟು ಸ್ನೇಹಿತರು ನನಗಾಗಿ  ಬಂದಿದ್ದಾರೆ. ಮಾಧ್ಯಮದವರು ನಮ್ಮ ಚಿತ್ರವನ್ನು ಗೆಲ್ಲಿಸಿ ಎಂದು ಹೇಳಿದರು.

   ತನಿಷಾ ಕುಪ್ಪಂಡ ಮಾತನಾಡಿ ಎಲ್ಲರ ಪರಿಶ್ರಮದಿಂದ ಈ ಸಿನಿಮಾ ಆಗಿದೆ. ಊರಬ್ಬಕ್ಕೆ ಹೋಗಿ ಅಲ್ಲಿನ ಪಾತ್ರಧಾರಿಗಳಾಗಿ  ನಾವು ಕೆಲಸ ಮಾಡಿದ್ದೇವೆ ಎಂದರು. ಆಯುಷ್ ಎಂಟರ್ ಪ್ರೈಸಸ್ ಮೂಲಕ ನರೇಶ್ ಗೌಡ್ರು ನಿರ್ಮಿಸಿರುವ ಈ ಚಿತ್ರದಲ್ಲಿ ದೊಡ್ಡಣ್ಣ, ಮಿಮಿಕ್ರಿ ಗೋಪಿ, ಬಿರಾದಾರ್, ಸಿದ್ದು ಮೂಲಿಮನಿ, ಮಿತ್ರ, ಪಾಯಲ್ ಚಂಗಪ್ಪ, ಡಾ.ನಂಜಪ್ಪ, ಅರವಿಂದ್ ರಾವ್ ಹೀಗೆ ಕಲಾವಿದರ ದಂಡೇ ಅಭಿನಯಿಸಿದೆ.  ಅಕ್ಷಯ್ ಎಸ್.ರಿಶಭ್ ಅವರ ಸಂಗೀತ, ಕೃಷ್ಣಕುಮಾರ್ ಅವರ ಛಾಯಾಗ್ರಹಣ, ಆರ್.ಡಿ.ರವಿ ಅವರ ಸಂಕಲನ ಈ ಚಿತ್ರಕ್ಕಿದೆ.

 

Copyright@2018 Chitralahari | All Rights Reserved. Photo Journalist K.S. Mokshendra,