*"ಬಾಸ್" ಚಿತ್ರಕ್ಕೆ ಸಿವಿಲ್ ನ್ಯಾಯಾಲಯ ನೀಡಿದ್ದ ತಡೆಯಾಜ್ಞೆ ತೆರವು* . ಸಿರಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಾವಾಗಿರುವ, ವಿ.ಲವ ನಿರ್ದೇಶನದಲ್ಲಿ ತನುಷ್ ಶಿವಣ್ಣ ನಾಯಕನಾಗಿ ನಟಿಸಿರುವ "ಬಾಸ್" ಚಿತ್ರದ ಕುರಿತು ನಗರದ ಸಿವಿಲ್ ನ್ಯಾಯಾಲಯ ನೀಡಿದ್ದ ತಾತ್ಕಾಲಿಕ ತಡೆಯಾಜ್ಞೆಯನ್ನು ಇತ್ತೀಚೆಗೆ ತೆರವುಗೊಳಿಸಲಾಗಿದೆ.
. ಈ ಹಿಂದೆ ನಟ ದರ್ಶನ್ ಹಾಗೂ ಅವರ ಧರ್ಮಪತ್ನಿ ವಿಜಯಲಕ್ಷ್ಮಿ ದರ್ಶನ್ ಅವರು "ಬಾಸ್" ಚಲನಚಿತ್ರ ಬಿಡುಗಡೆಯನ್ನು ತಡೆಗಟ್ಟುವಂತೆ ಕೋರಿ ಸಿವಿಲ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿ ತಾತ್ಕಾಲಿಕ ತಡೆಯಾಜ್ಞೆ ಆದೇಶವನ್ನು ಪಡೆದಿದ್ದರು. ಇತ್ತೀಚೆಗೆ ನಡೆದ ವಿಚಾರಣೆಯಲ್ಲಿ ನ್ಯಾಯಾಲಯ ಪ್ರಕರಣದ ವಾದ - ಪ್ರತಿವಾದಗಳನ್ನು ಪರಿಶೀಲಿಸಿ ಚಲನಚಿತ್ರದ ಮೇಲಿದ್ದ ತಾತ್ಕಾಲಿಕ ತಡೆಯಾಜ್ಞೆಯನ್ನು ರದ್ದುಪಡಿಸಿದೆ. "ಬಾಸ್" ಚಿತ್ರದ ಕುರಿತಾಗಿ ಹಿರಿಯ ವಕೀಲರು ಹಾಗೂ ವಕೀಲರ ಸಂಘದ ಅಧ್ಯಕ್ಷರಾದ ವಿವೇಕ್ ಸುಬ್ಬಾರೆಡ್ಡಿ ಅವರು ವಾದ ಮಂಡಿಸಿದರು. ಅವರ ವಾದಗಳನ್ನು ಪರಿಗಣಿಸಿದ ನ್ಯಾಯಾಲಯ "ಬಾಸ್" ಚಿತ್ರ ಬಿಡುಗಡೆಗೆ ಅನುಮತಿ ನೀಡಿದೆ. ಇದರಿಂದ ನಮ್ಮ ಚಿತ್ರದ ಬಿಡುಗಡೆಗೆ ಇದ್ದ ಅಡೆತಡೆಗಳು ನಿವಾರಣೆಯಾಗಿ ಬಿಡುಗಡೆಯ ದಾರಿ ಸುಗಮವಾಗಿದೆ ಎಂದು ಚಿತ್ರದ ನಿರ್ಮಾಪಕ - ನಾಯಕ ತುನುಷ್ ಶಿವಣ್ಣ ಹಾಗೂ ನಿರ್ದೇಶಕ ವಿ.ಲವ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.