*ನಿರ್ಮಾಣ ಸಂಸ್ಥೆ ತೆರೆದ ನಟಿ ಮೈತ್ರಿಯಾಗೌಡ*
ಬಣ್ಣದಲೋಕಕ್ಕೆ ಒಮ್ಮೆ ಬಂದರೆ ಅದರಿಂದ ಹೊರಬರವುದು ಅಷ್ಟು ಸುಲಭವಾಗಿರುವುದಿಲ್ಲ. ಕೆಲವರು ನಟನೆಯಿಂದ ದೂರ ಉಳಿದರೂ, ಇದೇ ಕ್ಷೇತ್ರದಲ್ಲಿ ಏನಾದರೂ ಒಂದು ಕಾರ್ಯದಲ್ಲಿ ತೊಡಗಿಕೊಳ್ಳುತ್ತಾರೆ. ಆ ಸಾಲಿಗೆ ನಟಿ *ಮೈತ್ರಿಯಾಗೌಡ* ಸೇರಿಕೊಳ್ಳುತ್ತಾರೆ. ’ಮೌರ್ಯ’ ಚಿತ್ರದಲ್ಲಿ ಪುನೀತ್ ರಾಜ್ಕುಮಾರ್ ತಂಗಿಯಾಗಿ ಪರಿಚಯಗೊಂಡು, ನಂತರ 8 ಸಿನಿಮಾಗಳಿಗೆ ನಾಯಕಿಯಾಗಿ ನಟಿಸಿದ್ದರು. ಕಾರಣಾಂತರದಿಂದ ಅಭಿನಯಕ್ಕೆ ಬ್ರೇಕ್ ನೀಡಿ ಸಾಮಾಜಿಕ ಸೇವೆ ಕಡೆ ಗಮನ ಹರಿಸಿದ್ದರು.
ಈಗ *’ಮೈತ್ರಿಯಾ ಗ್ಲೋಬಲ್ ಟ್ರಸ್ಟ್’* ಮೂಲಕ ಚಿತ್ರ ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಇದರ ಮೊದಲ ಹಂತವಾಗಿ ನಟ ಅನಿರುದ್ದ್, ಹಿರಿಯ ನಿರ್ಮಾಪಕ ಉದಯ್ಮೆಹ್ತಾ, ವಿಧಾನ ಪರಿಷತ್ ಸದಸ್ಯ ಶರವಣ ಟ್ರಸ್ಟ್ ಉದ್ಗಾಟನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಭಹಾರೈಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮೈತ್ರಿಯಾಗೌಡ, ಇಂದು ನನ್ನ ಹುಟ್ಟುಹಬ್ಬದ ಸಲುವಾಗಿ ಸಂಸ್ಥೆ ಶುರು ಮಾಡಿದ್ದೇನೆ. ಚಿಕ್ಕವಳಿದ್ದಾಗ ಮುಂದೆ ಏನಾಗುತ್ತಿಯಾ ಅಂತ ಯಾರಾದರೂ ಕೇಳಿದರೆ, ನಾನು ನಟಿಯಾಗಬೇಕು, ಸಮಾಜಸೇವೆ ಮಾಡಬೇಕೆಂದು ಹೇಳುತ್ತಿದ್ದೆ. ನಾಯಕಿಯಾದ ಸಮಯದಲ್ಲಿ ಅನಿರುದ್ದ್ ಮಾಡುತ್ತಿದ್ದ ಸೇವೆಗಳು, ಉದಯ್ಮೆಹ್ತಾ ಕಾರ್ಯವೈಖರಿ. ಇವರಿಬ್ಬರ ಪ್ರೇರಣೆಯಿಂದ ಟ್ರಸ್ಟ್ ಶುರು ಮಾಡಿದ್ದೇನೆ. ಇದರ ಮೂಲಕ ಹೊಸ ಪ್ರತಿಭೆಗಳಿಗೆ ಅವಕಾಶ ಮಾಡಿಕೊಡಲಾಗುವುದು. ಜತೆಗೆ ಅನಾಥಶ್ರಮ, ಗೋಶಾಲೆ, ವೃದ್ದಾಶ್ರಮ, ಬೀದಿ ನಾಯಿಗಳ ರಕ್ಷಣೆ, ಫ್ಯಾಶನ್ ಷೋ ಇನ್ನಿತರೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಈಗಾಗಲೇ ಎರಡು ಕಥೆಗಳನ್ನು ಕೇಳಿದ್ದೇನೆ. ಹೊಸ ಕಲಾವಿದರ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಎಲ್ಲವನ್ನು ತಿಳಿಸುತ್ತೇನೆಂದು ಮೈತ್ರಿಯಾಗೌಡ ಹೇಳಿದರು.
ಸುಂದರ ಸಮಯದಲ್ಲಿ ಕಲಾವಿದರುಗಳಾದ ಯಶಸ್ಸೂರ್ಯ, ರವಿಚೇತನ್, ಕಿರುತೆರೆ ಕಲಾವಿದರುಗಳು ಹಾಜರಿದ್ದರು