Kudaknanmakklu.News

Sunday, December 14, 2025

 

*ಸೆಟ್ಟೇರಿದ ಕುಡುಕ ನನ್ಮಕ್ಳು*

 

      ಸದಭಿರುಚಿಯ *ನಿರ್ದೇಶಕ ಆಸ್ಕರ್ ಕೃಷ್ಣ* ಅವರ ಎಂಟನೇ ಹೊಸ ಚಿತ್ರ *ಕುಡುಕ ನನ್ಮಕ್ಳು* ಮುಹೂರ್ತ ಸಮಾರಂಭವು ಶ್ರೀ ವಿದ್ಯಾ ಗಣಪತಿ ದೇವಸ್ಥಾನದಲ್ಲಿ ಅದ್ದೂರಿಯಾಗಿ ನಡೆಯಿತು. ಹಿರಿಯ ಚಿತ್ರ ಸಾಹಿತಿ ಡಾ.ವಿ.ನಾಗೇಂದ್ರ ಪ್ರಸಾದ್ ಪ್ರಥಮ ದೃಶ್ಯಕ್ಕೆ ಕ್ಲಾಪ್ ಮಾಡಿದರೆ, ಡಾ.ಬಿ.ಆರ್.ಅಂಬೇಡ್ಕರ್ ಸೇನೆಯ ರಾಜ್ಯಾಧ್ಯಕ್ಷರಾದ ಪಿ.ಮೂರ್ತಿ ಕ್ಯಾಮಾರ ಸ್ವಿಚ್ ಆನ್ ಮಾಡುವುದರ ಮೂಲಕ ತಂಡಕ್ಕೆ ಶುಭ ಹಾರೈಸಿದರು. ಸುಂದರ ಸಮಯದಲ್ಲಿ ಹಿರಿಯ ಸಂಗೀತ ಸಂಯೋಜಕ,ನಟ ಹಾಗೂ ನಿರ್ದೇಶಕ ವಿ.ಮನೋಹರ್ ಹಾಜರಿದ್ದರು. ’ತುಂಬಾ ಒಳ್ಳೆಯವರು’ ಎಂಬ ಅಡಿಬರಹ ಇರಲಿದೆ. ಸಮಾನ ಸಿನಿಮಾ ಮೋಹಿಗಳಾದ ಅರುಣ ಶೆಟ್ಟಿ, ವೈಶಾಲಿ ಮುರಳೀಧರ್ ಕೊಟ್ಟೂರು, ಪಲ್ಲವಿ ಅರುಣ್ ಅಗ್ನಿಹೋತ್ರಿ, ಎಸ್.ಹೆಚ್.ಬಾಬು ತುಮಕೂರು, ನಿಂಗರಾಜು.ಬಿ, ಲೋಕೇಶ್.ಎಸ್, ಸಿದ್ದಲಿಂಗಯ್ಯ ಮತ್ತು ರವೀಂದ್ರ ನಾಯಕ್ ಜಂಟಿಯಾಗಿ ಕಲಾ ಭೂಮಿ ಕಂಬೈನ್ಸ್ ಅಡಿಯಲ್ಲಿ ಬಂಡವಾಳ ಹೂಡುತ್ತಿರುವುದು ಹೊಸ ಅನುಭವ. ಇದರಲ್ಲಿ ಒಂದಷ್ಟು ನಿರ್ಮಾಪಕರು ಸಣ್ಣ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ.

 

      ಮಜಾಭಾರತ, ಕಾಮಿಡಿ ಕಿಲಾಡಿಗಳು ಖ್ಯಾತಿಯ ಚಂದ್ರಪ್ರಭ, ವಿನೋದ್ ಗೊಬ್ಬರಗಾಲ, ಮಿಮಿಕ್ರಿ ಗೋಪಿ ಮತ್ತು ಸಚಿನ್ ಪುರೋಹಿತ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇಡೀ ಚಿತ್ರದ ಹೈಲೈಟ್ ಎಂಬುವಂತೆ ಆಕರ್ಷಕ ರೋಲ್‌ನಲ್ಲಿ ಚೈತ್ರಾ ಕೊಟ್ಟೂರು, ಹಾಗೂ ಉಳಿದಂತೆ ಲಯಾ ಕೋಕಿಲ, ಧರಣಿ, ನಿಸರ್ಗ ಮಂಜುನಾಥ್, ಪ್ರಿಯಾಂಕ, ಮಮತಾ ಮುಂತಾದವರು ನಟಿಸುತ್ತಿದ್ದಾರೆ. ಸಾಹಿತ್ಯ ಮತ್ತು ಸಂಗೀತ ಮಂಜುಕವಿ, ಛಾಯಾಗ್ರಹಣ ವಿನಯ್ ಗೌಡ. ಸಂಕಲನ ಅಯುರ್, ರಿಯಾಲಿಟಿ ಷೋಗಳಿಗೆ ಕಾಮಿಡಿ ಡೈಲಾಗ್ ಬರೆಯುತ್ತಿರುವ ವೆಂಕಟ್ ಚಿತ್ರಕಥೆ ಅಲ್ಲದೆ ನಗು ಉಕ್ಕಿಸುವ ಪದಗಳನ್ನು ಪೋಣಿಸುತ್ತಿದ್ದಾರೆ. ಸಾಹಸ ವೈಲೆಂಟ್ ವೇಲು ಅವರದ್ದಾಗಿದೆ.

         ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕರು, ನಿರ್ಮಾಪಕರೆಲ್ಲರೂ ಹಲವು ವರ್ಷಗಳಿಂದ ಸ್ನೇಹಿತರು. ಒಮ್ಮೆ ಔಪಚಾರಿಕವಾಗಿ ಪಾರ್ಟಿ ಮಾಡುವಾಗ ಹುಟ್ಟಿಕೊಂಡ ಕಥೆಯೇ ಚಿತ್ರವಾಗುವುದಕ್ಕೆ ಕಾರಣವಾಯಿತು. ಇದು ಯಾವುದೇ ಕಾರಣಕ್ಕೂ ಮದ್ಯಪಾನ ಪ್ರಿಯರಿಗೆ ಬೈಗುಳ ಆಗಿರುವುದಿಲ್ಲ. ಸಹಜವಾಗಿ ನಾವುಗಳು ಮಾತನಾಡುವ ಭಾಷೆಯನ್ನು ಶೀರ್ಷಿಕೆಯನ್ನಾಗಿ ಬಳಸಲಾಗಿದೆ. ಜಗತ್ತಿನ ಎಲ್ಲಾ ಕುಡುಕರ ಪ್ರತಿನಿದಿಗಳಾಗಿ 25,30,35 ಹಾಗೂ 40 ವರ್ಷದ ನಾಲ್ಕು ಪಾತ್ರಗಳು ಸಾಗುತ್ತದೆ. ಆಯಾ ವಯಸ್ಸಿನಲ್ಲಿ ಅವರ ಚಿಂತನೆಗಳು, ಅಭಿಪ್ರಾಯಗಳು, ನಡವಳಿಕೆ ಏನಿರುತ್ತದೆ? ಕುಡಿತದಿಂದ ದೈಹಿಕವಾಗಿ,  ಮಾನಸಿಕವಾಗಿ, ಕೌಟಂಬಿಕವಾಗಿ ಹಾಗೂ ಸಾಮಾಜಿಕವಾಗಿ ಯಾವ ರೀತಿ ಸಮಸ್ಯೆಗಳು ಉಂಟಾಗುತ್ತದೆ ಎಂಬುದನ್ನು ತೋರಿಸುವುರ ಜತೆಗೆ ಅರ್ಥಪೂರ್ಣ ಸಂದೇಶವನ್ನು ಹೇಳುವ ಪ್ರಯತ್ನ ಮಾಡಲಾಗುತ್ತಿದೆ. ಬೆಂಗಳೂರು, ಮೈಸೂರು, ಮಂಡ್ಯ ಹಾಗೂ ಇತರೆ ಸುಂದರ ತಾಣಗಳಲ್ಲಿ ಜನವರಿ ಎರಡರಿಂದ ಶೂಟಿಂಗ್‌ಗೆ ತೆರೆಳಲು ಯೋಜನೆ ರೂಪಿಸಲಾಗಿದೆ ಎಂಬುದಾಗಿ ಆಸ್ಕರ್ ಕೃಷ್ಣ ಮಾಹಿತಿ ತೆರೆದಿಟ್ಟರು.

 

Copyright@2018 Chitralahari | All Rights Reserved. Photo Journalist K.S. Mokshendra,