Shree Krishna.Film News

Thursday, March 26, 2026

 

‘ಶ್ರೀಕೃಷ್ಣ’ ಚಿತ್ರದ ‘ಉಧೋ ಉಧೋ ಯಲ್ಲವ್ವ …’ ಲಿರಿಕಲ್‍ ಹಾಡು ಬಿಡುಗಡೆ

 

ಶಂಕರ‍್ ರಾಜ ವರ್ಮ ಅಭಿನಯದ, ನಿರ್ದೇಶನದ, ನಿರ್ಮಾಣದ ಹೊಸ ಚಿತ್ರ

 

ಈ ಹಿಂದೆ ‘ಬ್ರಹ್ಮರಾಕ್ಷಸ’ ಎಂಬ ಚಿತ್ರ ಮಾಡಿದ್ದ ಶಂಕರ‍್ ರಾಜ ವರ್ಮ, ಇದೀಗ ಸದ್ದಿಲ್ಲದೆ ‘ಶ್ರೀಕೃಷ್ಣ’ ಎಂಬ ಇನ್ನೊಂದು ಹೊಸ ಚಿತ್ರವನ್ನು ಮಾಡಿ ಮುಗಿಸಿದ್ದಾರೆ. ಈಗಾಗಲೇ ಚಿತ್ರೀಕರಣ ಮುಗಿದು, ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರುವ ಚಿತ್ರವು ಮೇ ತಿಂಗಳಲ್ಲಿ ಬಿಡುಗಡೆಯಾಗುತ್ತಿದ್ದು, ಅದಕ್ಕೂ ಮೊದಲು ಚಿತ್ರದ ಮೊದಲ ಹಾಡನ್ನು ಬಿಡುಗಡೆ ಮಾಡುವ ಮೂಲಕ ಚಿತ್ರತಂಡ ಪ್ರಚಾರಕ್ಕೆ ಚಾಲನೆ ನೀಡಿದೆ.

 

‘ಉಧೋ ಉಧೋ ಯಲ್ಲವ್ವ …’ ಎಂದು ಸಾಗುವ ಹಾಡಿಗೆ ಎಂ.ಎಸ್‍. ತ್ಯಾಗರಾಜ್‍ ಸಾಹಿತ್ಯ ಬರೆದು, ಸಂಗೀತ ಸಂಯೋಜಿಸುವುದರ ಜೊತೆಗೆ, ಧ್ವನಿಯಾಗಿದ್ದಾರೆ. ಅವರ ಜೊತೆಗೆ ಸರಯೂ ಸಹ ಹಾಡಿದ್ದಾರೆ. ಈ ಲಿರಿಕಲ್‍ ಹಾಡು, ಇದೀಗ ಯೂಟ್ಯೂಬ್‍ನ ಸಿರಿ ಮ್ಯೂಸಿಕ್‍ ಚಾನಲ್‍ನಲ್ಲಿ ಬಿಡುಗಡೆ ಆಗಿದೆ. ಶುಕ್ರವಾರ ಉತ್ಸವ್‍ ಲೆಗೆಸಿಯಲ್ಲಿ ನಡೆದ ಅದ್ದೂರಿ ಸಮಾರಂಭದಲ್ಲಿ ಚಿತ್ರತಂಡದವರು ಹಾಡನ್ನು ಬಿಡುಗಡೆ ಮಾಡಿದ್ದಾರೆ.

 

ಬೃಹಸ್ಪತಿ ಕ್ರಿಯೇಷನ್ಸ್ ಬ್ಯಾನರ‍್ ಅಡಿ ಶಂಕರ‍್ ರಾಜ ವರ್ಮ ಮತ್ತು ಅಜಯ್‍ ಕುಮಾರ್ ಪಿ.ಎಂ. ಜಂಟಿಯಾಗಿ ನಿರ್ಮಿಸಿರುವ ‘ಶ್ರೀಕೃಷ್ಣ’ ಚಿತ್ರಕ್ಕೆ ಶಿವಲಿಂಗಯ್ಯ ಸಿ.ಎಂ, ಉಲ್ಲಾಸ್‍ ಕೆ.ಸಿ.ಎಸ್, ಚಾಣುಕ್ಯ ಆರ‍್, ‘ನೆನಪಿರಲಿ’ ಮೋಹನ್‍ ಮತ್ತು ಲತಾ ಮಂಜುನಾಥ್‍ ಸಹ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ.

ನಾನು ಚಿತ್ರ ನಿರ್ದೇಶಕನಾಗುತ್ತೇನೆ, ಒಂದು ಸಂಸ್ಥೆ ಕಟ್ಟಿ ಇಷ್ಟು ದೂರ ಸಾಗುತ್ತೇನೆ ಎಂದು ಯಾವತ್ತೂ ಯೋಚಿಸಿರಲಿಲ್ಲ ಎಂದು ಮಾತು ಶುರು ಮಾಡಿದ ನಟ-ನಿರ್ದೇಶಕ ಶಂಕರ‍್ ರಾಜ ವರ್ಮ, ‘ಅದಕ್ಕೆ ಕಾರಣರಾದವರು ನಮ್ಮ ತಂದೆ-ತಾಯಿ, ಕುಟುಂಬದವರು ಮತ್ತು ಸ್ನೇಹಿತರು. ಅವರೆಲ್ಲರ ಪ್ರೋತ್ಸಾಹ ಮತ್ತು ಬೆಂಬಲದಿಂದ ಈ ಚಿತ್ರ ಸಾಧ್ಯವಾಗಿದೆ. ‘ಬ್ರಹ್ಮರಾಕ್ಷಸ’ ಕಾರಣಾಂತರಗಳಿಂದ ಬಿಡುಗಡೆ ತಡವಾಯಿತು. ಆ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಗಳನ್ನು ಇಡೀ ತಂಡ ಇಟ್ಟುಕೊಂಡಿದ್ದೆವು. ಮುಂದೇನು ಎನ್ನುವಾಗ, ಶ್ರೀಕೃಷ್ಣನ ಒಂದು ಮಾತು ನೆನಪಯಿತು. ಯಾಕೆ ‘ಶ್ರೀಕೃಷ್ಣ’ ಎಂಬ ಶೀರ್ಷಿಕೆ ಇಟ್ಟುಕೊಂಡು ಸಿನಿಮಾ ಮಾಡಬಾರದೆಂದನಿಸಿತು. ‘ಬ್ರಹ್ಮರಾಕ್ಷಸ’ ಚಿತ್ರದಲ್ಲಿ ಬಹುತೇಕ ಯಾರೆಲ್ಲಾ ಕೆಲಸ ಮಾಡಿದ್ದಾರೋ, ಅವರೆಲ್ಲರೂ ಈ ಚಿತ್ರತಂಡದಲ್ಲಿದ್ದಾರೆ. ಈ ಚಿತ್ರದ ನಿಜವಾದ ಹೀರೋ ಮತ್ತು ನಿರ್ದೇಶಕ ನಾನಲ್ಲ, ನನ್ನ ಇಡೀ ತಂಡದ ಸಹಾಯದಿಂದ ಚಿತ್ರ ರುಪುಗೊಂಡಿದೆ. ಚಿತ್ರವು ಮೇ ತಿಂಗಳಲ್ಲಿ ಬಿಡುಗಡೆಯಾಗುತ್ತದೆ. ಮಾರ್ಚ್ 30ರಂದು ಚಿತ್ರದ ಟ್ರೇಲರ‍್ ಬಿಡುಗಡೆ ಮಾಡುತ್ತಿದ್ದೇವೆ’ ಎಂದು ಹೇಳಿದರು.

 

ಚಿತ್ರದ ಕುರಿತು ಮಾತನಾಡಿದ ಶಂಕರ‍್, ‘ಮೂರು ಅನಾಥರ ಜೀವನದಲ್ಲಿ ಏನೆಲ್ಲಾ ಆಗುತ್ತದೆ ಎಂಬುದನ್ನು ಈ ಚಿತ್ರ ಹೇಳುತ್ತದೆ. ಇಲ್ಲಿ ನಾಯಕಿ ಸಹ ಅನಾಥೆ. ಎಲ್ಲರೂ ಜೊತೆಯಾಗಿರುವಾಗ, ಅವರ ಜೀವನದಲ್ಲೊಂದು ಘಟನೆ ನಡೆಯುತ್ತದೆ. ಇದರಿಂದ ಅವರು ಜೈಲಿಗೂ ಹೋಗಬೇಕಾಗುತ್ತದೆ. ಜೈಲಿಂದ ತಪ್ಪಿಸಿಕೊಂಡು ಬಂದ ನಂತರ ಅವರು ಏನೆಲ್ಲಾ ಮಾಡುತ್ತಾರೆ ಎನ್ನುವುದೇ ಚಿತ್ರದ ಕಥೆ’ ಎಂದರು.

 

ಈ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿರುವ ಹುಬ್ಬಳ್ಳಿ ಮೂಲದ ಚೈತ್ರ ತೋಟದ, ‘ನಾನಿಲ್ಲಿ ಅನಾಥೆಯಾಗಿ ಅಭಿನಯಿಸಿದ್ದೇನೆ. ಆಕೆ ಜೀವನದಲ್ಲಿ ಏನೆಲ್ಲಾ ಕಷ್ಟಪಡುತ್ತಾಳೆ, ತೀರಾ ಕಷ್ಟದಲ್ಲಿರುವಾಗ ನಾಯಕ ಬಂದು ಹೇಗೆ ಆಕೆಯ ಜೀವನವನ್ನು ರೂಪಿಸುತ್ತಾನೆ ಎಂದು ಬಹಳ ಚೆನ್ನಾಗಿ ತೋರಿಸಿದ್ದಾರೆ. ನಾನು ‘ಬ್ರಹ್ಮರಾಕ್ಷಸ’ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದೆ. ಇಲ್ಲಿ ನಾಯಕಿಯಾಗಿದ್ದೇನೆ. ನಿರ್ದೇಶಕ ಶಂಕರ‍್ ಎಲ್ಲೂ ರಾಜಿ ಮಾಡಿಕೊಳ್ಳದೇ ಈ ಚಿತ್ರವನ್ನು ರೂಪಿಸಿದ್ದಾರೆ. ಈ ಚಿತ್ರ ಎಲ್ಲರಿಗೂ ಇಷ್ಟವಾಗುತ್ತದೆ ಎಂಬ ನಂಬಿಕೆ ಇದೆ’ ಎಂದರು.

 

ನಿರ್ಮಾಪಕ ಅಜಯ್‍ ಮಾತನಾಡಿ, ‘ಇದು ಸ್ನೇಹಿತರು ಸ್ನೇಹಕ್ಕಾಗಿ ಸ್ನೇಹಿತರಿಗೋಸ್ಕರ ಮಾಡುತ್ತಿರುವಂತಹ ಚಿತ್ರ. ಈ ಚಿತ್ರತಂಡದಲ್ಲಿ ನಮ್ಮ ಸಾಕಷ್ಟು ಸ್ನೇಹಿತರಿದ್ದಾರೆ. ಅವರೆಲ್ಲರಿಗೂ ಈ ಚಿತ್ರದಿಂದ ಒಳ್ಳೆಯದಾಗಬೇಕು’ ಎಂದು ಹೇಳಿದರು.

 

‘ಶ್ರೀಕೃಷ್ಣ’ ಚಿತ್ರದಲ್ಲಿ ಶಂಕರ‍್ ರಾಜ ವರ್ಮ, ಚೈತ್ರಾ ತೋಟದ್‍ ಜೊತೆಗೆ ಪ್ರದೀಪ್‍ ಪೂಜಾರಿ, ಭುವನ್‍ ಗೌಡ, ಸ್ನೇಹಾ, ಈಶ್ವರ‍್ ಶೆಟ್ಟಿ ಮುಂತಾದವರು ನಟಿಸಿದ್ದು ಎಂ.ಎಸ್‍. ತ್ಯಾಗರಾಜ್‍ ಸಾಹಿತ್ಯ ಮತ್ತು ಸಂಗೀತ, ಅನಿರುದ್ಧ್ ಛಾಯಾಗ್ರಹಣ ಹಾಗೂ ಕೀರ್ತಿರಾಜು ಅವರ ಸಂಕಲನವಿದೆ.

 

Copyright@2018 Chitralahari | All Rights Reserved. Photo Journalist K.S. Mokshendra,