Maha Kaaliputra.News

Monday, March 09, 2026

 

'ಮಹಾ ಕಾಳಿಪುತ್ರ’ ಶೀರ್ಷಿಕೆ ಬಿಡುಗಡೆ

 

* ರೈತನಿಂದ ಸೈನಿಕನವರೆಗೆ ಸಾಗುವ ಕಥೆ...

 

    ತಿರುಪತಿ ತಿರುಮಲ ಪ್ರೊಡಕ್ಷನ್ಸ್ ಮೂಲಕ ಗಿರೀಶ್ ಎಸ್.ಎಂ. ಅವರು ನಿರ್ಮಿಸುತ್ತಿರುವ ನೂತನ ಚಿತ್ರ ಮಹಾಕಾಳಿ ಪುತ್ರ. ಗಿರೀಶ್ ಅವರೇ ನಿರ್ದೇಶಿಸುತ್ತಿರುವ ಈ ಚಿತ್ರದ ಟೈಟಲ್ ಲಾಂಚ್ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು‌. ಗಿರೀಶ್ ಗೌಡ ಈ ಚಿತ್ರಕ್ಕೆ ಚಿತ್ರಕಥೆ ಬರೆದು ನಿರ್ದೇಶನದಲ್ಲಿ ಸಹಕಾರ ನೀಡುತ್ತಿದ್ದಾರೆ.

   ಈ ಚಿತ್ರದ ನಾಯಕ, ನಿರ್ಮಾಪಕ, ನಿರ್ದೇಶಕ ಗಿರೀಶ್ ಎಸ್.ಎಂ. ಮಾತನಾಡಿ ಮೂಲತಃ ನಾನೊಬ್ಬ ರೈತ. ಆ ರೈತನ ಬಗ್ಗೆ  ಸಿನಿಮಾ ಮಾಡಲು ಬಂದಿದ್ದೇನೆ. ಇದು ನನ್ನ ಮೊದಲ ಚಿತ್ರ. ಟೈಟಲ್ ಬಗ್ಗೆ ಹೇಳಬೇಕೆಂದರೆ, ಮಹಾಕಾಳಿಪುತ್ರ ಎಂದರೆ ದೈವರ ಆರಾಧಕ, ರೈತರು ಪ್ರತಿದಿನ  ದೇವಿಯ ಪೂಜೆ ಮಾಡಿಕೊಂಡೇ ತಮ್ಮ ಕಾಯಕಕ್ಕೆ ಹೊರಡುತ್ತಿದ್ದರು. ಆ ರೈತನನ್ನು ದೇವಿ ಪುತ್ರ ಅಂತ ಚಿತ್ರದಲ್ಲಿ ತೋರಿಸ್ತಿದ್ದೇವೆ.

 ರೈತರ ಬಗ್ಗೆ ಒಂದೊಳ್ಳೆ ಮೆಸೇಜ್ ಇಟ್ಕೊಂಡು ಈ ಸಿನಿಮಾ ಮಾಡ್ತಿದ್ದೇವೆ. ಹಿಂದಿನ ಕಾಲದಲ್ಲಿ ರೈತರು ಪ್ರಾಮಾಣಿಕವಾಗಿ ನಿಯತ್ತಿಂದ ದುಡಿದು ಇಡೀ ದೇಶಕ್ಕೆ ಅನ್ನ ಹಾಕ್ತಿದ್ದರು. ಇವತ್ತು ಆ ರೈತನಿಗೆ ಸಮಾಜದಿಂದ ಸಿಗಬೇಕಾದ ಗೌರವ, ಬೆಲೆ ಸಿಗ್ತಿಲ್ಲ. ಮಣ್ಣನ್ನು ನಂಬಿ ದುಡಿಯುವ ರೈತನಿಂದ ಹಿಡಿದು ದೇಶ ಕಾಯೋ ಸೈನಿಕನಿಗೆ ಲಿಂಕ್ ಕೊಟ್ಟು ಈ ಕಾನ್ಸೆಪ್ಟ್  ಮಾಡಿದ್ದೇವೆ. ರೈತ ಆಗ, ಇವಾಗ್ಲೂ ವ್ಯವಸಾಯ ಮಾಡ್ತಿದ್ದಾರೆ. ಆದರೆ ಶೈಲಿ ಟೆಕ್ನಿಕಲಿ ಬದಲಾಗಿದೆ. ಎತ್ತುಗಳನ್ನು ಶೋಕಿಗೋಸ್ಕರ ಸಾಕೋದಲ್ಲ. ವ್ಯವಸಾಯಕ್ಕೋಸ್ಕರ ಸಾಕಿ ನಂತರ ಅವನ್ನು ರೇಸ್ಗೂ ಬಳಸಬಹುದು ಅಂತ ತೋರಿಸಿದ್ದೇವೆ. ನಮ್ಮ ಚಿತ್ರದಲ್ಲೂ ರೇಸ್ ಇರುತ್ತದೆ. ಆರಂಭದಿಂದ ಕೊನೇವರೆಗೂ ಸಿನಿಮಾ ಹೊಸದಾಗಿ ಕಾಣಬೇಕು ಅಂತ ಪ್ರಯತ್ನಿಸುತ್ತಿದ್ದೇವೆ. ರೈತರ ಬಗ್ಗೆ ಈವರೆಗೆ ಬಂದ ಎಲ್ಲಾ ಸಿನಿಮಾಗಳಿಗಿಂತ ಇದರಲ್ಲಿ  ಬೇರೆಯದೇ ಕಥೆ ಇರುತ್ತದೆ. ಇದೇ ತಿಂಗಳ 15ರಿಂದ ಆರಂಭಿಸಿ ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ಮಾಡುತ್ತಿದ್ದೇವೆ, ಇದು ಪ್ಯಾನ್ ಇಂಡಿಯಾ ಚಿತ್ರವಾಗಿರೋದ್ರಿಂದ ಬೇರೆ, ಬೇರೆ ಭಾಷೆಯ ಕಲಾವಿದರೂ ಸಹ ಚಿತ್ರದಲ್ಲಿ ನಟಿಸುತ್ತಿದ್ದಾರೆ ಎಂದರು.

  ಚಿತ್ರಕಥೆ ಬರೆದಿರುವ ಗಿರೀಶ್ ಗೌಡ ಮಾತನಾಡಿ ಗಿರೀಶ್ ನನ್ನ ಬಳಿ ಅಸಿಸ್ಟೆಂಟ್ ಆಗಿ ಕೆಲಸ ಮಾಡ್ತಿದ್ದ, ನಾನೀಗ ಮದ್ದೂರ್ ವಡೆ ಸಿನಿಮಾ ಮಾಡ್ತಿದ್ದೇನೆ. ಇದು ನಮ್ಮ ಮಣ್ಣಿನ  ಕಥೆ. ಇದೇ ಮಣ್ಣು ಹೇಗೆ ಆರ್ಮಿಗೆ ಸೇರುತ್ತೆ, ನಮ್ಮ ಮಣ್ಣಿಂದ ಗನ್ ಪೌಡರ್ ಕೂಡ ಮಾಡಬಹುದು. ಅದರ ಮೈನಿಂಗ್ ನ  ಸಣ್ಣ ಬೇಸ್ ಇಟ್ಕೊಂಡು ಈ ಸಿನಿಮಾ ಮಾಡ್ತಿರೋದು. ನಮ್ಮ‌ಮಣ್ಣಿನ ಬೆಲೆ ಏನು ಅಂತ ತೋರಿಸ್ತಿದ್ದೇವೆ. ಚಿತ್ರದ ನಾಯಕಿಯನ್ನು ಶೀಘ್ರದಲ್ಲೇ ಪರಿಚಯಿಸುತ್ತೇವೆ. ದಸರಾ ವೇಳೆಗೆ ತೆರೆಗೆ ಬರಬೇಕೆಂಬ ಪ್ಲಾನಿದೆ. ಶಿವಮೊಗ್ಗದಲ್ಲಿ ನಡೆಯುವ ಜಾತ್ರೆಯನ್ನು ರಿಯಲ್ ಆಗಿ ಶೂಟ್ ಮಾಡ್ತಿದ್ದೇವೆ. ಮಂಡ್ಯ,ಮದ್ದೂರು ಸುತ್ತಮುತ್ತ ನಡೆಯೋ ಕಥೆಯಿದು‌. ಚಿತ್ರದಲ್ಲಿ ಒಂದೇ ಹಾಡಿದೆ. ರಾಹುಲ್ ವಸ್ತಾರ ಮ್ಯೂಸಿಕ್ ಮಾಡ್ತಿದ್ದಾರೆ. ಚೆನ್ನೈನಲ್ಲಿ ಬಿಜಿಎಂ ಮಾಡಿಸ್ತಿದ್ದೇವೆ. ಕೀರ್ತನ್ ಪೂಜಾರಿ ಕ್ಯಾಮೆರಾ ವರ್ಕ್ ಮಾಡ್ತಿದ್ದಾರೆ. ರವಿವರ್ಮ ಬಳಿ ಕೆಲಸ ಮಾಡ್ತಿದ್ದ ವಿಷ್ಣು ಅವರು ಆ್ಯಕ್ಷನ್ ಮಾಡ್ತಿದ್ದಾರೆ. ತಿಥಿ ಥರದ ಕಾನ್ಸೆಪ್ಟ್ ಇದು ಎಂದು ಹೇಳಿದರು.

ಸಾಧ್ಯವಾದಷ್ಟು ಜನರಿಗೆ ಇಷ್ಟವಾಗವಂಥ ಚಿತ್ರವನ್ನೇ ಮಾಡ್ತಿದ್ದೇವೆ. ಆದರೂ ಏಳು  ಬೀಳು ಸಹಜ. ಅದನ್ನು ಎದಿರಿಸಲೂ ಸಿದ್ದರಿದ್ದೇವೆ ಎಂಬುದು ನಿರ್ಮಾಪಕ ಗಿರೀಶ್ ಅವರ ಅಭಿಪ್ರಾಯ. ರಾಜನಿವಾಸ, ಪ್ಯಾರ್ ಚಿತ್ರದಲ್ಲಿ ಕೆಲಸ ಮಾಡಿದ ವೆಂಕಟೇಶ್ ಈ ಚಿತ್ರಕ್ಕೆ  ಸಂಭಾಷಣೆ ಬರೆದಿದ್ದಾರೆ.

  ತಂಡದ ಸ್ನೇಹಿತ ಮನಿಶ್ ಉಪಾಧ್ಯ ಮಾತನಾಡಿ, ಗಿರಿ ಒಂದೊಳ್ಳೆ ಮೆಸೇಜ್ ಇಟ್ಕೊಂಡು ಈ ಸಿನಿಮಾ ಮಾಡ್ತಿದ್ದಾರೆ. ಒಳ್ಳೆದಾಗ್ಲಿ ಎಂದರು.

 

Copyright@2018 Chitralahari | All Rights Reserved. Photo Journalist K.S. Mokshendra,