*ಫೆಬ್ರವರಿ 27 ರಂದು ಧನ್ವೀರ್ ಅಭಿನಯದ ಬಹು ನಿರೀಕ್ಷಿತ "ಹಯಗ್ರೀವ" ಚಿತ್ರ ತೆರೆಗೆ* .
ಕೆ.ವಿ.ಸಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ಶ್ರೀಮತಿ ಪದ್ಮ ಸಮೃದ್ಧಿ ಮಂಜುನಾಥ್ ನಿರ್ಮಿಸಿರುವ, ರಘುಕುಮಾರ್ ಓ.ಆರ್ ನಿರ್ದೇಶನದ ಹಾಗೂ ಧನ್ವೀರ್ ನಾಯಕರಾಗಿ ನಟಿಸಿರುವ ಬಹು ನಿರೀಕ್ಷಿತ "ಹಯಗ್ರೀವ" ಚಿತ್ರ ಫೆಬ್ರವರಿ 27 ರಂದು ರಾಜ್ಯಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ. ಇತ್ತೀಚೆಗಷ್ಟೇ ಬಿಡುಗಡೆಯಾಗಿರುವ ಚಿತ್ರದ ಟ್ರೇಲರ್ ಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಈ ಕುರಿತು ಹೆಚ್ಚಿನ ಮಾಹಿತಿ ನೀಡಲು ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಚಿತ್ರರಂಗದ ಸದಸ್ಯರು ಮಾತನಾಡಿದರು.
"ಹಯಗ್ರೀವ" ನಮ್ಮ ಸಂಸ್ಥೆಯ ಮೂರನೇ ಚಿತ್ರ ಎಂದು ಮಾತನಾಡಿದ ನಿರ್ಮಾಪಕ ಸಮೃದ್ಧಿ ಮಂಜುನಾಥ್, ನಾನು ಚಿತ್ರಪ್ರೇಮಿ. ಹೆಚ್ಚು ಚಿತ್ರಗಳನ್ನು ನೋಡುತ್ತಿರುತ್ತೇನೆ. ರಘುಕುಮಾರ್ ಅವರು ನಿರ್ದೇಶಿಸಿದ್ದ ಕಿರುಚಿತ್ರ ನೋಡಿದ್ದೆ. ಬಹಳ ಇಷ್ಟವಾಗಿತ್ತು. ಅವರನ್ನು ಕರೆದು ಒಂದೊಳ್ಳೆ ಕಥೆ ಇದ್ದರೆ ಸಿನಿಮಾ ಮಾಡೋಣ ಅಂತ ಹೇಳಿದೆ. ಅವರು ಈ ಚಿತ್ರದ ಕಥೆ ಹೇಳಿದರು. ದರ್ಶನ್ ಅವರ ಮೂಲಕ ಧನ್ವೀರ್ ಅವರ ಪರಿಚಯವಾಯಿತು. ಧನ್ವೀರ್ ಸೇರಿದಂತೆ ಎಲ್ಲಾ ಕಲಾವಿದರ ಅಭಿನಯ ಹಾಗೂ ತಂತ್ರಜ್ಞರ ಕಾರ್ಯವೈಖರಿ ಚೆನ್ನಾಗಿದೆ. ಕನ್ನಡದಲ್ಲಿ ತೀರ ಅಪರೂಪದ ಕಥೆ ಇದು. ಪ್ರೇಕ್ಷಕ ಕೊಟ್ಟ ದುಡ್ಡಿಗೆ ಮೋಸವಾಗದ ಚಿತ್ರವಿದು. ಇದೇ ಫೆಬ್ರವರಿ 27 ರಂದು "ಹಯಗ್ರೀವ" ಚಿತ್ರ ರಾಜ್ಯಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ. ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು.
ಕಥೆ ಮೆಚ್ಚಿ ನಿರ್ಮಾಣಕ್ಕೆ ಮುಂದಾದ ನಿರ್ಮಾಪಕರಿಗೆ ಧನ್ಯವಾದ ಎಂದು ಮಾತನಾಡಿದ ನಿರ್ದೇಶಕ ರಘುಕುಮಾರ್, ನಮ್ಮ ಚಿತ್ರದ ಕಥೆಯನ್ನು ಇಂಡಿಯನ್ ಮೈಥಾಲಜಿನ್ನು ಪ್ರಮುಖವಾಗಿಟ್ಟುಕೊಂಡು ಹೆಣೆಯಲಾಗಿದೆ. ಈ ರೀತಿಯ ಕಥೆ ಕನ್ನಡದಲ್ಲಿ ಅಪರೂಪ ಎನ್ನಬಹುದು. ಧನ್ವೀರ್ ನಾಯಕರಾಗಿ ನಟಿಸಿರುವ ಈ ಚಿತ್ರದ ನಾಯಕಿಯಾಗಿ ಸಂಜನಾ ಆನಂದ್ ಅಭಿನಯಿಸಿದ್ದಾರೆ. ಸಾಧುಕೋಕಿಲ, ಶರತ್ ಲೋಹಿತಾಶ್ವ , ಶೊಭ್ ರಾಜ್, ಅಶ್ವಿನಿ ಗೌಡ, ಗಿಲ್ಲಿ ನಟ ಮುಂತಾದವರು ತಾರಾಬಳಗದಲ್ಲಿದ್ದಾರೆ. ಜ್ಯೂಡಾ ಸ್ಯಾಂಡಿ ಸಂಗೀತ ನಿರ್ದೇಶನ, ಗಿರೀಶ್ ಆರ್ ಗೌಡ ಛಾಯಾಗ್ರಹಣ ಹಾಗೂ ಕೆ.ಎಂ.ಪ್ರಕಾಶ್ ಸಂಕಲನವಿರುವ ಈ ಚಿತ್ರಕ್ಕೆ ಶೈಲೇಶ್ ಕುಮಾರ್ ಹಾಗೂ ಚೇತನ್ ಸಿದ್ ಸಂಭಾಷಣೆ ಬರೆದಿದ್ದಾರೆ ಎಂದರು.
ನಿರ್ಮಾಪಕರಾದ ಸಮೃದ್ಧಿ ಮಂಜುನಾಥ್ ಅವರಿಗೆ ಧನ್ಯವಾದ. ಇತ್ತೀಚೆಗಷ್ಟೇ ವಿಜಯಲಕ್ಷ್ಮಿ ದರ್ಶನ್ ಅವರು ಈ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿಕೊಟ್ಟಿದ್ದರು. ಅವರಿಗೂ ಧನ್ಯವಾದ ಹೇಳುತ್ತೇನೆ. ನಿರ್ದೇಶಕ ರಘುಕುಮಾರ್ ಅವರು ಹೇಳಿದ ಕಥೆ ಬಹಳ ಇಷ್ಟವಾಯಿತು. ರಘುಕುಮಾರ್ ಅವರು ಕಥೆ ಹೇಳಿದ ರೀತಿಯಲ್ಲೇ ಚಿತ್ರವನ್ನು ತೆರೆಯ ಮೇಲೂ ತಂದಿದ್ದಾರೆ. ಎರಡು ಶೇಡ್ ಗಳಲ್ಲಿ ನನ್ನ ಪಾತ್ರವಿರುತ್ತದೆ. ಒಂದು ಪೊಲೀಸ್ ಅಧಿಕಾರಿ ಪಾತ್ರ. ಮತ್ತೊಂದು ಏನು ಎಂಬುದನ್ನು ಸಿನಿಮಾದಲ್ಲೇ ನೋಡಬೇಕು. ನಾಯಕಿ ಸಂಜನಾ ಆನಂದ್ ಅವರು ಚೆನ್ನಾಗಿ ನಟಿಸಿದ್ದಾರೆ. ಹಿರಿಯ ಕಲಾವಿದರ ಜೊತೆಗೆ ಅಭಿನಯಿದ್ದು ಬಹಳ ಖುಷಿಯಾಯಿತು. ಮೊದಲಿನಿಂದಲೂ ನಾವೆಲ್ಲರೂ ನೀಡುತ್ತಾ ಬಂದಿರುವ ಪ್ರೋತ್ಸಾಹ ಈ ಚಿತ್ರಕ್ಕೂ ಇರಲಿ ಎಂದರು.
ತಮ್ಮ ಪಾತ್ರದ ಬಗ್ಗೆ ಮಾಹಿತಿ ನೀಡಿದ ನಾಯಕಿ ಸಂಜನಾ ಆನಂದ್, ಚಿತ್ರತಂಡಕ್ಕೆ ಧನ್ಯವಾದ ಹೇಳಿದರು. ಚಿತ್ರದಲ್ಲಿ ನಟಿಸಿರುವ ನಟ ಅಶ್ವಿನ್ ಹಾಸನ್ ಹಾಗೂ ನಟಿ ಆಶಾರಾಣಿ ಅವರು ತಮ್ಮ ಪಾತ್ರದ ಕುರಿತು ಮಾಹಿತಿ ನೀಡಿದರು.