ಮೆಜೆಸ್ಟಿಕ್- 2 ಟ್ರೈಲರ್ ರಿಲೀಸ್
ಮಾರ್ಚ್ ತಿಂಗಳಲ್ಲಿ ತೆರೆಗೆ
ಮೆಜೆಸ್ಟಿಕ್, 25 ವರ್ಷಗಳ ಹಿಂದೆ ಬಿಡುಗಡೆಯಾಗಿ ಯಶಸ್ವೀ ಪ್ರದರ್ಶನ ಕಂಡ ಚಿತ್ರ. ಇದೀಗ ಅದೇ ಹೆಸರಿನ ಮತ್ತೊಂದು ಚಿತ್ರ ನಿರ್ಮಾಣವಾಗಿದ್ದು, ಆ ಚಿತ್ರದಲ್ಲೂ ಈಗಿನ ಮೆಜೆಸ್ಟಿಕ್ ಏರಿಯಾದಲ್ಲಿ ಏನೇನೆಲ್ಲ ವ್ಯವಹಾರಗಳು, ದಂದೆಗಳು ನಡೆಯುತ್ತವೆ ಎಂಬುದನ್ನು ರಿಯಲ್ಲಾಗಿ ತೆರೆಯ ಮೇಲೆ ತೋರಿಸುವ ಪ್ರಯತ್ನ ಮಾಡಲಾಗಿದೆ. ಈ ಚಿತ್ರಕ್ಕೆ ಮೆಜೆಸ್ಟಿಕ್- -2 ಎಂಬ ಟೈಟಲ್ ಇಡಲಾಗಿದ್ದು ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭ ಬುಧವಾರ ನೆರವೇರಿದೆ.
ಅಮ್ಮಾ ಎಂಟರ್ಪ್ರೈಸಸ್ ಮೂಲಕ ಚಿತ್ರದುರ್ಗದ ಹೆಚ್.ಆನಂದಪ್ಪ ಅವರು ಬಿಗ್ ಬಜೆಟ್ ನಲ್ಲಿ ನಿರ್ಮಿಸಿರುವ ಆ ಚಿತ್ರದಲ್ಲಿ ಹಿರಿಯ ನಿರ್ಮಾಪಕ ಶಿಲ್ಪಾ ಶ್ರೀನಿವಾಸ್ ಅವರ ಪುತ್ರ ಭರತ್ ಕುಮಾರ್ ನಾಯಕನಾಗಿ ನಟಿಸಿದ್ದಾರೆ. ಹಿರಿಯನಟಿ ಶೃತಿ ಅವರು ತಾಯಿಯ ಪಾತ್ರವನ್ನು ನಿರ್ವಹಿಸಿದ್ದಾರೆ. ಅಲ್ಕದೆ ಮತ್ತೊಬ್ಬ ನಟಿ ಮಾಲಾಶ್ರೀ ಅವರು ಕೂಡ ಚಿತ್ರದಲ್ಲಿದ್ದಾರೆ. ನಾಯಕಿಯಾಗಿ ನಟಿ ಸಂಹಿತಾ ವಿನ್ಯಾ ಅವರು ಕಾಣಿಸಿಕೊಂಡಿದ್ದಾರೆ, ಈಗಿನ ಮೆಜೆಸ್ಟಿಕ್ ಏರಿಯಾ ಹೇಗಿದೆ, ಅಲ್ಲಿ ನಡೆಯುವ ವ್ಯವಹಾರಗಳು, ಅಕ್ರಮ ಚಟುವಟಿಕೆಗಳು ಅಲ್ಲದೆ ಈಗಲೂ ಅಲ್ಲಿ ರೌಡಿಸಂ ಹೇಗೆ ನಡೆಯುತ್ತೆ ಎಂಬುದನ್ನು ಅಲ್ಲಿಯೇ ಹುಟ್ಟಿ ಬೆಳೆದ ಹುಡುಗನೊಬ್ಬನ ಕಥೆಯ ಮೂಲಕ ನಿರ್ದೇಶರು ಚಿತ್ರದಲ್ಲಿ ಹೇಳಿದ್ದಾರೆ. ಚಿತ್ರದ ಟ್ರೈಲರ್ನ್ನು ನಿರ್ಮಾಪಕರ ಪತ್ನಿ ಶ್ರೀಮತಿ ನಿರ್ಮಲಮ್ಮ ಅವರು ಬಿಡುಗಡೆ ಮಾಡಿದರು. ಮಾರ್ಚ್ ತಿಂಗಳಲ್ಲಿ ಚಿತ್ರವನ್ನು ರಿಲೀಸ್ ಮಾಡಲು ನಿರ್ಮಾಪಕ ಹೆಚ್.ಆನಂದಪ್ಪ ಅವರು ಸಿದ್ದತೆ ಮಾಡಿಕೊಂಡಿದ್ದಾರೆ.
ಚಿತ್ತದ ನಾಯಕ ಭರತ್ಕುಮಾರ ಮಾತನಾಡುತ್ತ ನನ್ನನ್ನು ನಾಯಕನನ್ನಾಗಿ ಚಿತ್ರರಂಗಕ್ಕೆ ಪರಿಚಯಿಸಿದ ನಿರ್ಮಾಪಕರಿಗೆ ನಾನು ಜೀವನ ಪೂರ್ತಿ ಅಭಾರಿ, ಇಷ್ಟು ದೊಡ್ಡ ಟೈಟಲ್ ಇರುವ ಚಿತ್ರದಲ್ಲಿ ಅವಕಾಶ ಮಾಡಿಕೊಟ್ಟಿದ್ದಾರೆ. ಜತೆಗೆ ನಮ್ಮ ತಂದೆಯ ಸಪೋರ್ಟ್ ಕೂಡ ದೊಡ್ಡದು. ಚಿತ್ರದ ಶೂಟಿಂಗ್ ತುಂಬಾ ಚೆನ್ನಾಗಿ ನಡೆಯಿತು, ಆನಂತರ ಸಾಕಷ್ಟು ತೊಂದ್ರೆ ಅನುಭವಿಸಬೇಕಾಯ್ತು. ನಮ್ಮನ್ನು ತುಳಿಯುವವರೇ ಜಾಸ್ತಿ. ಅವರನ್ನೆಲ್ಲ ಎದುರಿಸಿ ನಿಂತು ಗೆಲ್ಲಬೇಕು, ನಮ್ಮ ಸಿನಿಮಾದಿಂದ ಹೆಸರು ಮಾಡಬೇಕು, ಕೆಲಸದಿಂದ ಗುರುತಿಸಿಕೊಳ್ಳಬೇಕು ಅಂತ ನಮ್ಮ ನಿರ್ಮಾಪಕರೇ ಹೇಳಿಕೊಟ್ಟಿದ್ದು, ನಾಯಕಿ ಸಂಹಿತಾ ವಿನ್ಯಾ ಅವರು ತುಂಬಾ ಹಾರ್ಡ್ ವರ್ಕರ್. ಶೃತಿ, ಮಾಲಾಶ್ರೀ ಅವರಂಥ ಹಿರಿಯ ಕಲಾವಿದೆಯರೊಂದಿಗೆ ನಟಿಸಿದ್ದು ನನ್ನ ಅದೃಷ್ಟ. ಮೆಜೆಸ್ಟಿಕ್ ಸುತ್ತಮುತ್ತಲಿನ ಜಗತ್ತು ಹೇಗಿರುತ್ತೆ ಅಂತ 10 ದಿನ ಸುತ್ತಾಡಿ ನೋಡಿದೆ, ಹಿಡನ್ ಕ್ಯಾಮೆರಾ ಇಟ್ಕೊಂಡು ಅಲ್ಲೆಲ್ಲ ನಡೆದಾಡಿದ್ದೇನೆ. ಬೆಳಗಿನ ಜಾವ, ರಾತ್ರಿ ವೇಳೆ ಓಡಾಡಿ ಅಲ್ಲಿ ಹೇಗೆಲ್ಲ, ಏನೆಲ್ಲ ನಡೆಯುತ್ತೆ ಎಂದು ಅರಿತಿದ್ದೇನೆ, ಎಲ್ಲಾ ರೀತಿಯ ಜನರನ್ನು ಅಲ್ಲಿ ಕಾಣಬಹುದು ಎಂದು ಹೇಳಿದರು,
ನಿರ್ಮಾಪಕ ಆನಂದಪ್ಪ ಅವರು ಮಾತನಾಡುತ್ತ ನನಗೆ ಸಿನಿಮಾ ಅಂದ್ರೇನು ಅಂತ ಗೊತ್ತಿರಲಿಲ್ಲ, ಚಿತ್ರರಂಗಕ್ಕೆ ಕಾಲಿಟ್ಟಮೇಲೆ ಎಲ್ಲ ಗೊತ್ತಾಯ್ತು, ನಾನು 4 ಬಾರಿ ಎಂಎಲ್ಎ ಎಲೆಕ್ಷನ್ಗೆ ನಿಂತು ಸೋತೆ. ಆದರೆ, ಈ 2 ಸಿನಿಮಾದಿಂದ ನೂರು ವರ್ಷಗಳಿಗಾಗುವಷ್ಟು ಅನುಭವ ಪಡೆದೆ. ಪ್ರೊಡ್ಯೂಸರ್ ಆಗಬೇಕು ಅನ್ನೋದು ನನ್ನ ಕನಸು. ಚಿತ್ರವೀಗ ಬಿಡುಗಡೆಗೆ ಸಿದ್ದವಾಗಿದೆ, ಹೀರೋ ತುಂಬಾ ಕಷ್ಟಪಟ್ಟು ಸಿನಿಮಾ ಮಾಡಿದ್ದಾರೆ ಎಂದರು. ನಾಯಕಿ ಸಂಹಿತಾ ವಿನ್ಯಾ ಮಾತನಾಡಿ ಒಂದು ಸ್ಟ್ರಾಂಗ್ ಲೈನ್ ಈ ಚಿತ್ರದಲ್ಲಿದೆ, ಶೃತಿ, ಮಾಲಾಶ್ರೀ ಅಂಥವರ ಜತೆ ಆಕ್ಟ್ ಮಾಡಿದ್ದು ತುಂಬಾ ಖುಷಿಯಾಯ್ತು, ಸಾಕಷ್ಟು ಏಳು ಬೀಳುಗಳನ್ನು ಕಂಡಂಥ ಚಿತ್ರವಿದು, ಬಿಡುಗಡೆಗೆ ನಾನೂ ಸಹ ಕಾಯುತ್ತಿದ್ದೇನೆ ಎಂದು ಹೇಳಿದರು, ಈ ಚಿತ್ರದಲ್ಲಿ ಒಟ್ಟು 5 ಹಾಡುಗಳಿದ್ದು, ವಿನು ಮನಸು ಸಂಗೀತ ನಿರ್ದೇಶನ ಮಾಡಿದ್ದಾರೆ. ಛಾಯಾಗ್ರಾಹಕರಾಗಿ ವೀನಸ್ ಮೂರ್ತಿ, ಅಸೋಸಿಯೇಟ್ ಡೈರೆಕ್ಟರ ಆಗಿ ವಿಜಯಕುಮಾರ್, ಸಾಹಸ ನಿರ್ದೇಶಕರಾಗಿ ಚಿನ್ನಯ್ಯ ಕೆಲಸ ಮಾಡಿದ್ದಾರೆ.