*ಆ್ಯಕ್ಷನ್, ಡ್ರಾಮಾ ’ಉಗ್ರ ತಾಂಡವ’ ಟೀಸರ್ ಬಿಡುಗಡೆ*
*ಮಲೆನಾಡ ಸೊಗಡಿನ ಚಿತ್ರ ನಿರ್ಮಿಸುತ್ತಿದ್ದಾರೆ ಸಮಾಜ ಸೇವಕ, ಡಾ||ಎನ್. ನರಸಿಂಹಮೂರ್ತಿ*
ಸಮಾಜ ಸೇವಕ, ರಿಯಲ್ ಎಸ್ಟೇಟ್ ಉದ್ಯಮಿ ಡಾ|| ಎನ್. ನರಸಿಂಹಮೂರ್ತಿ ಸುರಭಿ ಫಿಲಂಸ್ ಬ್ಯಾನರ್ ನಲ್ಲಿ ’ಉಗ್ರ ತಾಂಡವ’ ಸಿನಿಮಾ ನಿರ್ಮಿಸುತ್ತಿದ್ದಾರೆ. ಈ ಚಿತ್ರದ ಟೀಸರ್ ಇತ್ತೀಚಿಗೆ ಬಿಡುಗಡೆ ಆಗಿದೆ. ಗೌತಮ ಸೂರ್ಯ ನಿರ್ದೇಶಿಸುತ್ತಿರುವ ಈ ಚಿತ್ರದ ನಾಯಕನಾಗಿ ಚಿರಂತ ನಟಿಸುತ್ತಿದ್ದಾರೆ. ಮಲೆನಾಡ ಸೊಗಡಿನಲ್ಲಿ ತಯಾರಾಗುತ್ತಿರುವ ಈ ಸಿನಿಮಾದ ಶೂಟಿಂಗ್ ಇನ್ನಷ್ಟೇ ಶುರುವಾಗಬೇಕಾಗಿದೆ. ಕರಾವಳಿಯಲ್ಲಿ ನಡೆಯುವ ರಾಜಕೀಯ, ಮಾಫಿಯಾ ಹಾಗೂ ಜಮೀನ್ದಾರ-ಕಾರ್ಮಿಕರ ಸುತ್ತ ಈ ಚಿತ್ರದ ಕಥೆ ಸಾಗುತ್ತದೆ.
ಟೀಸರ್ ಬಿಡುಗಡೆ ನಂತರ ಮಾತನಾಡಿದ ನಿರ್ಮಾಪಕ ನರಸಿಂಹಮೂರ್ತಿ, ನಿರ್ದೇಶಕರು ತುಂಬಾ ಟೀಸರ್ ಚೆನ್ನಾಗಿ ಮಾಡಿದ್ದಾರೆ. ಹಾಗಾಗಿ ಸಿನಿಮಾ ಕೂಡ ಚೆನ್ನಾಗಿ ಮಾಡುತ್ತಾರೆ ಎಂಬ ವಿಶ್ವಾಸವಿದೆ. ಇದು ಹಳ್ಳಿಯಲ್ಲಿ ನಡೆಯುವ ಕಥೆ. ಅಲ್ಲಿಯ ಮೇಲು, ಕೀಳು, ರಾಜಕೀಯ ಹಾಗೂ ಒಬ್ಬ ವ್ಯಕ್ತಿಗೆ ಅನ್ಯಾಯ ಆದಾಗ ಹೇಗೆ ಸಿಡಿದೆದ್ದು ನಿಲ್ಲುತ್ತಾನೆ ಎಂಬುದು ಸಿನಿಮಾದ ಸಾರಾಂಶ. ಇಡೀ ತಂಡ ಶ್ರಮದಿಂದ ಸಿನಿಮಾ ಮಾಡುತ್ತಿದ್ದಾರೆ. ನನಗೆ ಸಿನಿಮಾ ನಂಟಿನ ಬಗ್ಗೆ ಹೇಳುವುದಾದರೆ 80-90ರ ದಶಕದಲ್ಲಿ ಸಮುದಾಯದಲ್ಲಿ ನಟಿಸಿದ್ದೆ. ನಂತರ ಒಂದು ಸಿನಿಮಾ ಮಾಡಲು ಹೋಗಿ ನಷ್ಟ ಅನುಭವಿಸಿದೆ. ಆ ನಂಟಿನಿಂದ ಈಗ ಮತ್ತೆ ಸಿನಿಮಾ ಮಾಡುವಂತೆ ಆಯ್ತು. ಇದು ನನ್ನ ನಿರ್ಮಾಣದ ಎರಡನೇ ಸಿನಿಮಾ. ಮುಂದಿನ ದಿನಗಳಲ್ಲೂ ಒಳ್ಳೆಯ ಸಿನಿಮಾಗಳನ್ನು ಮಾಡುವ ಯೋಚನೆ ಇದೆ ಎಂದು ಹೇಳಿದರು.
ನಂತರ ಚಿತ್ರದ ನಾಯಕ ಚಿರಂತ ಮಾತನಾಡಿ, ’ನಾನು ಈ ಮೊದಲು "ಆತ್ಮ" ಸಿನಿಮಾ ಮಾಡಿದ್ದೆ. ಇದು ಎರಡನೇ ಸಿನಿಮಾ. ಕಥೆ ಮಾಡುವಾಗ ರಾಜಕೀಯ ಹಿನ್ನೆಲೆಯಲ್ಲಿ ಮಾಡಬೇಕು ಎಂದು ಹೊರಟಿದ್ದು. ನಂತರ ಜಾತಿಯ ಒಂದು ಎಳೆ ಇಟ್ಟುಕೊಂಡು ಕಥೆ ಮಾಡಿದ್ದೀವಿ. ನಮ್ಮ ಸಮಾಜದಲ್ಲಿ ನಡೆಯುವ ಕಥೆಯೇ ಚಿತ್ರದಲ್ಲಿ ಇರಲಿದೆ. ಅದರಲ್ಲೂ ಮಲೆನಾಡಿನಲ್ಲಿ ನಡೆಯುವ ಜಮೀನ್ದಾರರ ಹಾಗೂ ಕಾರ್ಮಿಕರ ನಡುವೆ ನಡೆಯುವ ಕಥೆಯನ್ನು ಆ್ಯಕ್ಷನ್, ಡ್ರಾಮಾ ಮೂಲಕ ಹೇಳ ಹೊರಟಿದ್ದೇವೆ. ಇದೇ ನವೆಂಬರ್ ನಿಂದ ಶೂಟಿಂಗ್ ಶುರು ಮಾಡುತ್ತೇವೆ ಎಂದರು.
’ನನಗೆ ಚಿಕ್ಕ ವಯಸ್ಸಿನಿಂದ ನಟಿ ಆಗಬೇಕು ಎಂಬ ಆಸೆ. ಈಗ ನಿರ್ಮಾಪಕ ನರಸಿಂಹಮೂರ್ತಿ ಅವರ ಸಹಕಾರದಿಂದ ಚಿತ್ರದ ನಾಯಕಿಯಾಗಿ ನಟಿಸುತ್ತಿದ್ದೇನೆ. ಜೊತೆಗೆ ನಿರ್ಮಾಪಕರು ಮುಂದಿನ ಎರಡು ಸಿನಿಮಾಗಳಲ್ಲಿ ನಟಿಸಲು ಅವಕಾಶ ಮಾಡಿ ಕೊಟ್ಡಿದ್ದಾರೆ ಎಂದರು.
ನಾನು ಹಿರಿಯ ನಿರ್ದೇಶಕರಾದ ದಿನೇಶ್ ಬಾಬು, ಪಿ. ವಾಸು ಮುಂತಾದವರ ಜೊತೆ ಕೆಲಸ ಮಾಡಿದ್ದೇನೆ ಈ ಚಿತ್ರ ನಿರ್ದೇಶಿಸಲು ಅವಕಾಶ ನೀಡಿದ ನಿರ್ಮಾಪಕರಿಗೆ ಹಾಗೂ ಚಿರಂತ್ ಅವರಿಗೆ ಧನ್ಯವಾದ ಎಂದು ನಿರ್ದೇಶಕ ಗೌತಮ್ ಸೂರ್ಯ ಹೇಳಿದರು.
ಮತ್ತೋರ್ವ ನಟಿಯಾಗಿ ಮಧುಬಾಲ ಪೊಲೀಸ್ ಅಧಿಕಾರಿ ಪಾತ್ರ ಮಾಡುತ್ತಿದ್ದಾರೆ. ಜೊತೆಗೆ ಹುಬ್ಬಳ್ಳಿ ಮೂಲದ ಅಶ್ವಿನಿ ಎಸ್. ರೀಲ್ಸ್ ಮಾಡುವ ಮಾಡೆಲ್ ಹುಡುಗಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇವರ ಜೊತೆ ಕಿರಣ್ ಕೂಡ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಶ್ರೀ ಸುರೇಶ್ ಸಂಗೀತ ಸಂಯೋಜಿಸುತ್ತಿರುವ ಈ ಚಿತ್ರದ ಸಹ ನಿರ್ಮಾಪಕರಾಗಿ ಸಂಜಯ್ ಹಾಗೂ ಭುವನ ಸಾಥ್ ನೀಡಿದ್ದಾರೆ.