Yaarigu Helbedi.News

Sunday, October 19, 2025

 

*ಶೀರ್ಷಿಕೆ ಹಳೇದು ಕಥೆ ಹೊಸತು*

 

       ಮೂರು ದಶಕಗಳ ಹಿಂದೆ *ಯಾರಿಗೂ ಹೇಳ್ಬೇಡಿ* ಚಿತ್ರವು ತೆರೆಕಂಡು ಹಿಟ್ ಆಗಿತ್ತು. ಕಟ್ ಮಾಡಿದರೆ ಈಗ ಅದೇ ಹೆಸರಿನಲ್ಲಿ ಸಿನಿಮಾವೊಂದು ಸದ್ದಿಲ್ಲದೆ ತೆರೆಗೆ ಬರಲು ಸಿದ್ದವಾಗಿದೆ. ಕಿಚ್ಚ ಸುದೀಪ್ ಈಗಾಗಲೇ ಟ್ರೇಲರ್ ಲೋಕಾರ್ಪಣೆಗೊಳಿಸಿ ಮೆಚ್ಚುಗೆಯ ಮಾತನಾಡಿ ತಂಡಕ್ಕೆ ಶುಭ ಹಾರೈಸಿದ್ದಾರೆ. ಸುದ್ದಿ ಮಾಡುವ ಸಲುವಾಗಿ ಟ್ರೇಲರ್ ಬಿಡುಗಡೆ ಸಮಾರಂಭ ಮೊನ್ನೆಯಷ್ಟೇ ನಡೆಯಿತು. ಬೆಂಗಳೂರಿನಲ್ಲಿ ಇಂಜಿನಿಯರಿಂಗ್ ಶಿಕ್ಷಣ ಮುಗಿಸಿರುವ ಹೈದರಬಾದ್‌ನ *ಹರೀಶ್ ಅಮ್ಮಿನೇನಿ ಕನ್ನಡ ಭಾಷೆಯ ಅಭಿಮಾನದ ಮೇಲೆ ಬಂಡವಾಳ* ಹೂಡಿದ್ದು, ಸುನಿಲ್‌ಕುಮಾರ್ ನಿರ್ಮಾಣದಲ್ಲಿ ಸಾಥ್ ನೀಡಿದ್ದಾರೆ. *ಶಿವಗಣೇಶ್ ಆಕ್ಷನ್ ಕಟ್* ಹೇಳಿದ್ದಾರೆ.

 

      ಕಾಮಿಡಿ ಕಿಲಾಡಿಗಳು ಖ್ಯಾತಿಯ ಅಪ್ಪಣ್ಣ ಸ್ನೇಹಿತನಾಗಿ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ’ಟೋಬಿ’ ಮತ್ತು ’ಸಪ್ತಸಾಗರದಾಚೆ ಎಲ್ಲೋ’ ಸಿನಿಮಾಗಳಲ್ಲಿ ಅಭಿನಯಿಸಿದ್ದ ಚೈತ್ರಾ ಆಚಾರ್ ಡಾಕ್ಟರ್ ಪಾತ್ರದಲ್ಲಿ ನಾಯಕಿ. ಅಶ್ವಿನಿ ಪೊಲೆಪಲ್ಲಿ ಉಪನಾಯಕಿ. ಉಳಿದಂತೆ ಶರತ್ ಲೋಹಿತಾಶ್ವ, ಚೈತ್ರಾರಾವ್, ಶಭರೇಶ್, ಕಾರ್ತಿಕ್ ಮುಂತಾದವರು ನಟಿಸಿದ್ದಾರೆ.

 

      ಸಂಗೀತ ಶಶಾಂಕ್ ಶೇಷಗಿರಿ, ಛಾಯಾಗ್ರಹಣ ಡೇವಿಡ್‌ಆನಂದರಾಜ್, ಸಂಭಾಷಣೆ ಶಿವರಾಜ್.ಡಿಎನ್‌ಎಸ್, ಹಿನ್ನಲೆ ಶಬ್ದ ಉದಿತ್‌ಹರಿದಾಸ್, ಸಾಹಸ ಕುಂಗುಫು ಚಂದ್ರು, ಸಾಹಿತ್ಯ ಕವಿರಾಜ್-ಪ್ರಮೋದ್ ಮರವಂತೆ, ಸಂಕಲನ ದೀಪಕ್.ಸಿ.ಎಸ್ ಅವರದಾಗಿದೆ.

       ಈ ಸಂದರ್ಭದಲ್ಲಿ ಮಾಹಿತಿ ಹಂಚಿಕೊಂಡ ನಾಯಕ ಚೇತನ್ ವಿಕ್ಕಿ, ಇದೊಂದು ಸಂಪೂರ್ಣ ಹಾಸ್ಯಮಯ ಚಿತ್ರವಾಗಿದೆ ಶುರುವಿನಿಂದ ಕೊನೆವರೆಗೂ ನಗಿಸುತ್ತಲೇ ಸಾಗುತ್ತದೆ. ನಾನಿಲ್ಲಿ ವಿಡಿಯೋ ಜಾಕಿಯಾಗಿ ಕಾಣಿಸಿಕೊಂಡಿದ್ದು, ಮದುವೆ ಮುಂಚಿನ ಒಂದು ಸಂದರ್ಭದಲ್ಲಿ ಸುಳ್ಳು ಹೇಳಿ ಕಷ್ಟಕ್ಕೆ ಸಿಲುಕುತ್ತೇನೆ. ಅದನ್ನು ಯಾರಿಗೂ ಹೇಳ್ಬೇಡಿ ಎಂದು ಸುಳ್ಳಿನ ಸರಮಾಲೆಯನ್ನೆ ಕಟ್ಟುತ್ತೇನೆ. ಕೊನೆಗೆ ಅದನ್ನು ಮುಚ್ಚಿಡಲು ಹೋದಾಗ ಏನೆಲ್ಲಾ ಅವಾಂತರಗಳು ಆಗುತ್ತದೆ. ಅದರಿಂದ ಹೇಗೆ ಹೊರಗೆ ಬರುತ್ತೇನೆ ಎಂಬುದು ಕಾಮಿಡಿ ಮೂಲಕ ಹೇಳಲಾಗಿದೆ. ನೋಡುಗರಿಗೆ ಪೈಸಾ ವಸೂಲ್ ಸಿನಿಮಾ ಅಂತ ಖಂಡಿತ ಹೇಳಬಹುದು. ನಿಮ್ಮಗಳ ಸಹಕಾರ ಬೇಕೆಂದು ಕೋರಿಕೊಂಡರು.

 

       ಅಂದ ಹಾಗೆ ಚಿತ್ರವು ಇದೇ ತಿಂಗಳು ಚಿತ್ರಮಂದಿರಕ್ಕೆ ಲಗ್ಗೆ ಇಡಲಿದೆ.

 

Copyright@2018 Chitralahari | All Rights Reserved. Photo Journalist K.S. Mokshendra,