Kunte Bille.Film News

Monday, August 25, 2025

 

ಕುಂಟೆಬಿಲ್ಲೆ ಆಡಿದ ರೋಬೋಟ್​

ನಾಯಕಿ ಬರದಿದ್ದರೇನಂತೆ ವಿಶೇಷ ಅತಿಥಿಯಿಂದ ಟ್ರೇಲರ್​ ಬಿಡುಗಡೆ ಮಾಡಿಸಿದ ಚಿತ್ರತಂಡ

 

ಸಾಮಾನ್ಯವಾಗಿ ಸ್ಟಾರ್​ ಕಲಾವಿದರಿಂದಲೋ ಅಥವಾ ರಾಜಕಾರಣಿ ಅಥವಾ ವಿಐಪಿಗಳಿಂದಲೋ ಸಿನಿಮಾ ಟ್ರೇಲರ್​, ಟೀಸರ್​, ಪೋಸ್ಟರ್​, ಆಡಿಯೋ ಬಿಡುಗಡೆ ಮಾಡಿಸಲಾಗುತ್ತದೆ. ಆದರೆ, "ಕುಂಟೆಬಿಲ್ಲೆ’ ಚಿತ್ರತಂಡ ಸ್ನಾ$ಪಿ ಎಂಬ ಶ್ವಾನದಂತೆ ಓಡಾಡುವ ರೋಬೋಟ್​ನಿಂದ ತಮ್ಮ ಸಿನಿಮಾದ ಟ್ರೇಲರ್​ ರಿಲೀಸ್​ ಮಾಡಿಸಿದೆ. ಹೌದು, ಕಳೆದ ಐಪಿಎಲ್​ ಸೀಸನ್​ 18ರಲ್ಲಿ ಮೈದಾನದ ತುಂಬೆಲ್ಲ ಓಡಾಡುತ್ತಿದ್ದ "ಚಂಪಕ್​' ರೋಬೋಟ್​ ಹೋಲುವ "ಸ್ನಾ$ಪಿ’ಯನ್ನು ಮೈಸೂರು ಮೂಲದ ಪವನ್​ ಎಂಬುವವರು ಹಾಂಕಾಂಗ್​ನಿಂದ ಆಮದು ಮಾಡಿಸಿಕೊಂಡಿದ್ದು, ರೋಬೋಟ್​ಗೂ "ಕುಂಟೆಬಿಲ್ಲೆ’ ಮೊದಲ ಸಿನಿಮಾ ಕಾರ್ಯಕ್ರಮ ಎಂಬುದು ವಿಶೇಷ. "ದಕ್ಷಯಜ್ಞ’, "ತರ್ಲೆ ವಿಲೇಜ್​', "ಋತುಮತಿ’, "ಹೂವಿನ ಹಾರ’ ಚಿತ್ರಗಳ ಖ್ಯಾತಿಯ ಸಿದ್ದೇಗೌಡ ನಿರ್ದೇಶನದ ಎಂಟನೇ ಚಿತ್ರ "ಕುಂಟೆಬಿಲ್ಲೆ’. ನಾಯಕಿ ಮೇಶ್ರೀ ಸೇರಿದಂತೆ ಚಿತ್ರದಲ್ಲಿ ನಟಿಸಿರುವ ಕೆಲ ಹೆಸರಾಂತ ಕಲಾವಿದರು ಟ್ರೇಲರ್​ ಬಿಡುಗಡೆ ಕಾರ್ಯಕ್ರಮಕ್ಕೆ ಗೈರಾದ ಬಗ್ಗೆ ಬೇಸರ ವ್ಯಕ್ತಪಡಿಸುತ್ತಲೇ ಸ್ನಾ$ಪಿಗೆ ಧನ್ಯವಾದ ತಿಳಿಸಿದ ನಿರ್ದೇಶಕ ಸಿದ್ದೇಗೌಡ, "ಇದುವರೆಗೂ ನಾನು ಗ್ರಾಮೀಣ ಜನ ಜೀವನದ ಮೇಲೆ ಬೆಳಕು ಚೆಲ್ಲುವ ಸಿನಿಮಾಗಳನ್ನೇ ಮಾಡಿಕೊಂಡು ಬಂದಿದ್ದೇನೆ. "ಕುಂಟೆಬಿಲ್ಲೆ’ ಸಹ ಹಳ್ಳಿಯ ಸೊಗಡಿನ ಕಥೆ. ಲವ್​, ಸಸ್ಪೆನ್ಸ್​ ಅಂಶಗಳಿರುವ ಚಿತ್ರ. ಬೇಡದ ತಪ್ಪನ್ನು ಮಾಡಿ ನಮ್ಮ ಕೈಯಾರೆ ನಾವೇ ನಮ್ಮ ಪ್ರೀತಿಯನ್ನು ಹೇಗೆ ಹಾಳು ಮಾಡಿಕೊಳ್ಳುತ್ತೇವೆ  ಎಂಬುದರ ಸುತ್ತ ಕಥೆ ಸಾಗುತ್ತದೆ. ಜನವರಿಯಲ್ಲಿ ಚಿತ್ರೀಕರಣ ಪ್ರಾರಂಭಿಸಿದೆವು, ಇದೀಗ ಶೂಟಿಂಗ್​, ಪೋಸ್ಟ್​&ಪ್ರೊಡಕ್ಷನ್​ ಪೂರ್ಣಗೊಳಿಸಿ ಸದ್ಯ ಸೆನ್ಸಾರ್​ ಹಂತದಲ್ಲಿದ್ದೇವೆ’ ಎಂದು ಮಾಹಿತಿ ನೀಡಿದರು. ರಾಮನಗರ, ಎಚ್​ಡಿ ಕೋಟೆ ಸುತ್ತಮುತ್ತ 40 ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ

ಚಿತ್ರದಲ್ಲಿ ಮೂರು ಹಾಡುಗಳು ಮತ್ತು ಒಂದು ಸಾಹಸ ಸನ್ನಿವೇಶವಿದೆ. ಕುಮಾರ್​ ಗೌಡ ಜಿ ಮತ್ತು ಶಿವು ಎಸ್​ಬಿ ಜಂಟಿಯಾಗಿ "ಕುಂಟೆಬಿಲ್ಲೆ’ ನಿರ್ಮಿಸಿದ್ದಾರೆ. ಕುಮಾರ್​ ಗೌಡ, "ಈಗ್ಗೆ 30 ವರ್ಷಗಳ ಹಿಂದೆ ಸಿನಿಮಾದಲ್ಲಿ ನಟಿಸಬೇಕು ಅಂತ ಬೆಂಗಳೂರಿಗೆ ಬಂದಿದ್ದೆ. ಆದರೆ, ಆಗ ಯಾರೂ ಪರಿಚಯವಿರಲಿಲ್ಲ. ಅವಕಾಶಗಳೂ ಸಿಗಲಿಲ್ಲ. ಹೀಗಾಗಿ ಊರಿಗೆ ವಾಪಸ್​ ಹೋದೆ. ಇದೀಗ ಈ ಚಿತ್ರದ ಮೂಲಕ ನಾನು ನಿರ್ಮಾಪಕನಾಗಿ ಮತ್ತು ನನ್ನ ಮಗ ಯದು ನಾಯಕನಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದೇವೆ’ ಎಂದರು. ಮತ್ತೊಬ್ಬ ನಿರ್ಮಾಪಕ ಎಸ್​ಬಿ ಶಿವು, "ಇದು ನಾನು ನಿರ್ಮಿಸುತ್ತಿರುವ ಆರನೇ ಸಿನಿಮಾ. ಆದರೆ, ಗಾಂಧಿನಗರದಲ್ಲಿ ನಾನು ಯಾರು ಅಂತ ಯಾರಿಗೂ ಗೊತ್ತಿಲ್ಲ. ನಿರ್ದೇಶಕ ಜೋಗಿ ಪ್ರೇಮ್​ ಅವರಿಂದ ಚಿತ್ರದ ಒಂದು ಹಾಡನ್ನು ಹಾಡಿಸೋಕೆ ಅವರ ಅಸಿಸ್ಟೆಂಟ್​ ದಶಾವರ ಚಂದ್ರು ಬಳಿ ಕೇಳಿದರೆ ಐದು ಲಕ್ಷ ರೂ. ದುಡ್ಡು ತಗೊಂಡು ಬನ್ನಿ ಎಂದರು’ ಎಂದು ಬೇಸರ ವ್ಯಕ್ತಪಡಿಸಿದರು. ನಾಯಕ ಯದು ಕ್ರಿಕೆಟರ್​ ಆಗುವ ಆಸೆಯನ್ನು ಬದಿಗಿಟ್ಟು, ಅಪ್ಪನ ಆಸೆ ಈಡೇರಿಸಲು ಚಿತ್ರರಂಗಕ್ಕೆ ಬಂದಿದ್ದಾರೆ. "ನಾನಿಲ್ಲಿ ಕೋಳಿ ಾರಂನಲ್ಲಿ ಕೆಲಸ ಮಾಡುವ ಬಡ ಕುಟುಂಬದ ಹುಡುಗನ ಪಾತ್ರದಲ್ಲಿ ನಟಿಸಿದ್ದೇನೆ. ಪ್ರೀತಿಯನ್ನು ಉಳಿಸಿಕೊಳ್ಳಲು ನಾಯಕ ಹೇಗೆಲ್ಲ ಕಷ್ಟಪಡುತ್ತಾನೆ ಎಂಬುದು ಚಿತ್ರದ ಒನ್​ಲೈನ್​' ಎಂದರು. ಶಂಕರ್​ನಾಗ್​ ಅವರ "ಮಾಲ್ಗುಡಿ ಡೇಸ್​' ಸೇರಿ ಹಲವು ಧಾರಾವಾಹಿ, ಸಿನಿಮಾ ಮತ್ತು ನಾಟಕಗಳಿಗೆ ಕಲಾನಿರ್ದೇಶನ ಮಾಡಿರುವ ಖಾನ್​ ಸರ್​ "ಕುಂಟೆಬಿಲ್ಲೆ’ಯ ಕಲಾನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ಮತ್ತೊಬ್ಬ ನಟ ಧೀರಜ್​ ಅವರಿಗಿದು ಐದನೇ ಸಿನಿಮಾ. ನಾಯಕನ ಗೆಳೆಯನಾಗಿ ಅವರು ಕಾಣಿಸಿಕೊಂಡಿದ್ದಾರೆ. ಅಂದಹಾಗೆ ಸಿನಿಮಾ ಇದೇ ಸೆ. 26ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.

 

Copyright@2018 Chitralahari | All Rights Reserved. Photo Journalist K.S. Mokshendra,