Gange Gowri.News

Saturday, August 23, 2025

 

*ಗೌರಿ ಗಣೇಶ ಹಬ್ಬದ ಸಲುವಾಗಿ ಗಂಗೆ ಗೌರಿ ಟ್ರೇಲರ್ ಮತ್ತು ಹಾಡು ಬಿಡುಗಡೆ*

 

    ಗೌರಿ ಗಣೇಶ ಹಬ್ಬದ ಪ್ರಯುಕ್ತ *ಗಂಗೆ ಗೌರಿ* ಚಿತ್ರದ ಟ್ರೇಲರ್ ಮತ್ತು ಹಾಡುಗಳ ಬಿಡುಗಡೆ ಕಾರ್ಯಕ್ರಮ ಶ್ರೀ ರೇಣುಕಾಂಬ ಸ್ಟುಡಿಯೋದಲ್ಲಿ ಅದ್ದೂರಿಯಾಗಿ ನಡೆಯಿತು. ಕುಡುಚಿ ಕ್ಷೇತ್ರದ ಮಾಜಿ ಶಾಸಕ ಪಿ.ರಾಜೀವ್, ಬಂಜಾರ ಸಂಸ್ಕ್ರತಿ ಹಾಗೂ ಭಾಷಾ ಆಕಾಡೆಮಿ ಅಧ್ಯಕ್ಷ ಡಾ.ಎ.ಆರ್.ಗೋವಿಂದಸ್ವಾಮಿ, ಡೇರಿಂಗ್ ಸ್ಟಾರ್ ಪ್ರಿಯಾಹಾಸನ್ ಮತ್ತು ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘದ ಅಧ್ಯಕ್ಷ ಎನ್ನಾರ‍್ಕೆ ವಿಶ್ವನಾಥ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ತಂಡಕ್ಕೆ ಶುಭ ಹಾರೈಸಿದರು.

 

      ಹಿರಿಯ ನಟ *ಗಣೇಶ್‌ರಾವ್ ಕೇಸರ್‌ಕರ್ ಶಿವನಾಗಿ ಕಾಣಿಸಿಕೊಂಡಿದ್ದು, ಇದು ಅವರ 350ನೇ ಚಿತ್ರ* ಎಂಬುದು ವಿಶೇಷ. ಹಾಗೂ *ಜಿ.ಆರ್.ಫಿಲಂಸ್ ಅಡಿಯಲ್ಲಿ ಎರಡನೇ ಕಾಣಿಕೆಯಾಗಿ ನಿರ್ಮಾಣ* ಮಾಡಿದ್ದಾರೆ. ತುಳಜಾ ಬಾಯಿ, ರೂಪ.ಎಸ್.ದೊಡ್ಮನಿ, ಸುಮಿತ ಪ್ರವೀಣ್, ಬಸವರಾಜ್ ದೇಸಾಯಿ ಸಹ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ. *ಚಿತ್ರಕಥೆ-ಸಾಹಿತ್ಯ ಮತ್ತು ನಿರ್ದೇಶನ ಬಿ.ಎ.ಪುರುಷೋತ್ತಮ್* ಅವರದಾಗಿದೆ.

  

       ರಂಗಭೂಮಿ ನಟಿ ರಾಣೆಬೆನ್ನೂರಿನ *ರೂಪಾಲಿ ಮೂರು ಶೇಡ್‌ಗಳಲ್ಲಿ ಅಂದರೆ ಗೌರಿ* ಪಾರ್ವತಿ, ದಾಕ್ಷಾಯಿಣಿ ಅವತಾರಗಳಲ್ಲಿ ಕಾಣಿಸಿಕೊಂಡಿದ್ದಾರೆ. *ಗಂಗೆಯಾಗಿ ನಿಖಿತಾಸ್ವಾಮಿ* ತಾರಾಗಣದಲ್ಲಿ ಜಯಸಿಂಹಮುಸೂರಿ, ಎಸ್ಕಾರ್ಟ್ ಶ್ರೀನಿವಾಸ್, ಜಿಮ್‌ಶಿವು ಬಸವರಾಜದೇಸಾಯಿ, ಧನಲಕ್ಷಿ, ಮಮತಗೌಡ, ಕು.ಋತುಸ್ಪರ್ಶ, ಗೀತಾ, ರಕ್ಷಾಗೌಡ ನಟಿಸಿದ್ದಾರೆ. ರಾಜ್‌ಭಾಸ್ಕರ್ ಸಂಗೀತ, ಗೌರಿವೆಂಕಟೇಶ್ ಛಾಯಾಗ್ರಹಣ, ಸಂಕಲನ-ಗ್ರಾಫಿಕ್ಸ್-ಡಿಐ ಅನಿಲ್ ಅವರದಾಗಿದೆ. ಬೆಂಗಳೂರು, ಶ್ರೀರಂಗಪಟ್ಟಣ, ಮೈಸೂರು ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ.

        ನಿರ್ದೇಶಕರು ಹೇಳುವಂತೆ ಶಿವ ಪುರಾಣದಲ್ಲಿ ಗಂಗೆ ಗೌರಿ ಸಂಬಂಧ ಏನು? ಗಂಗೆ ಯಾಕೆ ಶಿವನ ತಲೆ ಮೇಲೆ ಇರುತ್ತಾಳೆ? ಗೌರಿ ಯಾಕೆ ಶಿವನ ತೊಡೆ ಮೇಲೆ ಕೂತಿರುತ್ತಾಳೆ? ಇದಕ್ಕೆ ಕಾರಣವೇನು? ಇಬ್ಬರನ್ನು ಶಿವನು ಯಾವ ರೀತಿ ಸಂಭಾಳಿಸುತ್ತಾನೆ. ಇದರಲ್ಲಿ ಕೈಲಾಸವನ್ನು ಸೌಹಾರ್ದತೆಗೆ ಹೋಲಿಸಲಾಗಿದೆ. ಜಗತ್ ರಕ್ಷಕನಾದ ಪರಮೇಶ್ವರನಿಗೂ ವಿಧಿಯ ಕಾಟ ತಪ್ಪಿಲ್ಲ. ಶನಿದೇವನಿಂದ ಮೂವರು ಕಷ್ಟ ಅನುಭವಿಸುತ್ತಾರೆ. ಇವೆಲ್ಲಾ ಅಂಶಗಳನ್ನು ತೋರಿಸಲಾಗುತ್ತಿದೆ.

 

      ಇದು ನನಗೆ 32ನೇ ಚಿತ್ರವಾಗಿದೆ. ಭಾರತದಲ್ಲಿ ಅತಿ ಹೆಚ್ಚು ಪೌರಾಣಿಕ, ಐತಿಹಾಸಿಕ ಸಿನಿಮಾಗಳನ್ನು ನಿರ್ದೇಶನ ಮಾಡಿರುವುದು ಖುಷಿ ತಂದಿದೆ. ವಿಷಯವನ್ನು ಗಿನ್ನಿಸ್ ದಾಖಲೆಗೆ ತಿಳಿಸಲು ಹಿತೈಷಿಗಳು ಸಲಹೆ ನೀಡಿದ್ದಾರೆ. ನಿಮ್ಮಲ್ಲೆರ ಆರ್ಶಿವಾದರಿಂದ ಅದರ ಪುಣ್ಯ, ಭಾಗ್ಯ ನನಗೆ ಸಿಗಲಿ ಎಂದು ಬಿ.ಎ.ಪುರುಷೋತ್ತಮ್ ಸಂತಸ ಹಂಚಿಕೊಂಡರು.

 

      ರಾಜ್ಯದ ಸಾಂಸ್ಕ್ರತಿಕ ನೆಲೆಗಟ್ಟಿನ ಮೇಲೆ, ಸಮಾಜ ನಿರ್ಮಾಣವಾಗುವಲ್ಲಿ ಕಲೆಯ ಪಾತ್ರ ಮಹತ್ವದ್ದಾಗಿದೆ. ಕಲೆಯ ಆಯಾಮಗಳು ಬೇರೆ ಬೇರೆ ಇರುತ್ತದೆ. ಪ್ರಸ್ತುತ ಪೌರಾಣಿಕ ಚಿತ್ರಗಳು ಸಮಾಜ, ಯುವಜನತೆಯನ್ನು ತಲುಪಬೇಕೆಂದು ಮಾಜಿ ಶಾಸಕ ಪಿ.ರಾಜೀವ್ ಅಭಿಪ್ರಾಯಪಟ್ಟರು.

 

     ಕಮರ್ಷಿಯಲ್ ಸಿನಿಮಾಗಳ ಮಧ್ಯೆ ಪೌರಾಣಿಕ ಚಿತ್ರ ಮಾಡಿರುವ ನಿರ್ಮಾಪಕರ ಧೈರ್ಯಕ್ಕೆ ಮೆಚ್ಚಬೇಕಾಗಿದೆ. ಸಿನಿಮಾವು ತೆರೆ ಕಾಣುವ ತನಕ ನಿರ್ಮಾಪಕ, ನಿರ್ದೇಶಕರೊಂದಿಗೆ ಕಲಾವಿದರು, ತಂತ್ರಜ್ಞರು ಜತೆಯಾಗಿರಬೇಕು. ಒಂದು ಸಿನಿಮಾ ಗೆದ್ದರೆ ನೂರಾರು ಕುಟುಂಬಗಳಿಗೆ ಊಟ ಸಿಗುತ್ತದೆ. ಅದರಿಂದ ಎಲ್ಲಾ ಚಿತ್ರಗಳು ಹಣ ಮಾಡಬೇಕೆಂದು ಎನ್ನಾರ‍್ಕೆ ವಿಶ್ವನಾಥ್ ಹೇಳಿದರು.

 

Copyright@2018 Chitralahari | All Rights Reserved. Photo Journalist K.S. Mokshendra,