Usiru.Film News

Wednesday, August 20, 2025

 

ಉಸಿರು ಟ್ರೈಲರ್ ಬಿಡುಗಡೆ

   

      ಕೇಳಿದ್ದು ಸುಳ್ಳಾಗಬಹುದು, ನೋಡಿದ್ದು ಸುಳ್ಳಾಗಬಹುದು, ನಿಧಾನಿಸಿ  ಯೋಚಿಸಿದಾಗ ನಿಜ ತಿಳಿಯುವುದು ಎಂಬ ಕಾನ್ಸೆಪ್ಟ್  ಮೇಲೆ ತಯಾರಾದ  ಚಿತ್ರ ಉಸಿರು.  ಆರ್‌.ಎಸ್‌.ಪಿ. ಪ್ರೊಡಕ್ಷನ್ ಮೂಲಕ ಶ್ರೀಮತಿ ಲಕ್ಷ್ಮಿ ಹರೀಶ್ ಅವರು

ನಿರ್ಮಿಸಿರುವ, ಸಸ್ಪೆನ್ಸ್, ಥ್ರಿಲ್ಲರ್ ಕಥಾಹಂದರ ಒಳಗೊಂಡ ಈ  ಚಿತ್ರ ಇದೇ ತಿಂಗಳ 29ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ, ಉಸಿರು ಚಿತ್ರದ ಟ್ರೈಲರ್‌ನ್ನು ಉದ್ಯಮಿಗಳಾದ ಸುಧೀರ್ ಆನಂದ್ ಹಾಗೂ ರಾಮ್ ಸಂತಾನಿ ಅವರು ಬಿಡುಗಡೆಗೊಳಿಸಿ ಚಿತ್ರತಂಡಕ್ಕೆ ಶುಭ  ಹಾರೈಸಿದರು, ನಟ ತಿಲಕ್ ಶೇಖರ್, ಪ್ರಿಯಾ ಹೆಗ್ಡೆ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಚಿತ್ರಕ್ಕೆ ಪನೇಮ್ ಪ್ರಭಾಕರ್  ಕಥೆ, ಚಿತ್ರಕಥೆ  ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ಆರ್.ಎಸ್.ಗಣೇಶ್ ನಾರಾಯಣನ್ ಅವರ ಸಂಗೀತ ಸಂಯೋಜನೆ ಈ ಚಿತ್ರಕ್ಕಿದ್ದು, ಭೈರವರಾಮ ಸಂಭಾಷಣೆ ಹಾಗೂ ಸಾಹಿತ್ಯ ರಚಿಸಿದ್ದಾರೆ.  ಸಹ ನಿರ್ಮಾಪಕ ಹರೀಶ್ ಅವರು  ಚಿಕ್ಕ ಪಾತ್ರವೊಂದರಲ್ಲಿ  ಕಾಣಿಸಿಕೊಂಡಿದ್ದಾರೆ.  

  ಅನಾಮಧೇಯ ವ್ಯಕ್ತಿಯಿಂದ ಹೆಂಡತಿಯ ಪ್ರಾಣಕ್ಕೆ ಆಪತ್ತು ಬಂದಾಗ, ಪೊಲೀಸ್ ಅಧಿಕಾರಿಯೊಬ್ಬ ತನ್ನ ಪತ್ನಿಯನ್ನು ಹೇಗೆ ಕಾಪಾಡಿಕೊಳ್ಳುತ್ತಾನೆ ಎಂದು ನಿರ್ದೇಶಕ ಪ್ರಭಾಕರ್ ಅವರು ಈ ಚಿತ್ರದ ಮೂಕ ಹೇಳಹೊರಟಿದ್ದಾರೆ, ಬೆಂಗಳೂರು, ಮಡಿಕೇರಿ, ಚಿಕ್ಕಮಗಳೂರು, ಮೂಡಿಗೆರೆ ಸುತ್ತಮುತ್ತ ಈ ಚಿತ್ರದ ಚಿತ್ರೀಕರಣ ನಡೆಸಲಾಗಿದೆ.  

   ಈ ಸಂದರ್ಭದಲ್ಲಿ ನಿರ್ಮಾಪಕಿ ಲಕ್ಷ್ಮಿ ಹರೀಶ್ ಮಾತನಾಡುತ್ತ  ನಮ್ಮನೆಯಲ್ಲಿ ಒಂದು ಕಾರ್ಯಕ್ರಮ ರೆಡಿಯಾಗ್ತಿದೆ, ಅದನ್ನು ಪ್ರೇಕ್ಷಕರಿಗೆ ತಲುಪಿಸುವುದು ಮಾಧ್ಯಮದವರು, ನಿಮ್ಮನೆ ಹೆಣ್ಮಗಳು ಮೊದಲ ಬಾರಿಗೆ ಸಿನಿಮಾ ಮಾಡಿ ನಿಮ್ಮ ಮುಂದೆ ಬಂದಿದ್ದೇನೆ, ಇಲ್ಲಿ ನಾನೊಬ್ಬಳೇ ಅಲ್ಲ, ನನ್ನ ಜತೆ ತುಂಬಾ ಹೆಣ್ಣು ಮಕ್ಕಳಿದ್ದಾರೆ, ಈ ಸಿನಿಮಾ ಗೆದ್ರೆ ಅವರೆಲ್ಲ ಗೆಲ್ತಾರೆ. ನಮ್ಮ ಕಡೆಯಿಂದ ೧೦೦% ಎಫರ್ಟ್ ಹಾಕಿದ್ದೇವೆ, ಪ್ರಭಾಕರ್ ಅವರು ನಮಗೆ  ಈ ಕಥೆ ಹೇಳಿದಾಗ, ಸ್ಟೋರಿಲೈನ್  ಇಷ್ಟವಾಯ್ತು. ಈಗ ಪ್ರೇಕ್ಷಕರ ಮುಂದೆ ಬರುತ್ತಿದ್ದೇವೆ, ನಮ್ಮ ಚಿತ್ರಕ್ಕೆ ಪಿಆರ್‌ಓ ನಾಗೇಂದ್ರ ಅವರ ಸಹಕಾರ ತುಂಬಾ ಇದೆ  ಎಂದು ಹೇಳಿದರು  .  

   ನಂತರ ನಿರ್ದೇಶಕ ಪ್ರಭಾಕರ್ ಮಾತನಾಡಿ ನನ್ನ ನಿರ್ದೇಶನದ ಪ್ರಥಮ ಚಿತ್ರವಿದು, ನಾವೆಲ್ಲ ಸೇರಿ ಪ್ಯಾಷನೇಟ್ ಆಗಿ, ಒಂದೊಳ್ಳೇ ಟೀಮ್ ಕಟ್ಟಿಕೊಂಡು ದೊಡ್ಡಮಟ್ಟದಲ್ಲಿ ಈ ಚಿತ್ರವನ್ನು ಮಾಡಿದ್ದೇವೆ, ನಮ್ಮ ಚಿತ್ರದಲ್ಲಿ ಕಂಟೆಂಟೇ ಹೀರೋ.  ಗಂಡನ ಪ್ರೀತಿ, ಸ್ನೇಹ ಸಂಬಂಧ ಹೀಗೆ ಎಲ್ಲಾ ರೀತಿಯ ಎಮೋಶನ್ಸ್  ಚಿತ್ರದಲ್ಲಿದ್ದು, ಪ್ರತಿ ಪಾತ್ರಕ್ಕೂ  ಅದರದೇ ಆದ ಪ್ರಾಮುಖ್ಯತೆಯಿದೆ. ಟ್ರೈಲರ್ ಇಷ್ಟು ಚೆನ್ನಾಗಿ ಬರಲು ನನ್ನ ಟೀಮ್ ಕಾರಣ, 07.08.09:ಚಿತ್ರದಲ್ಲಿ ಈ ನಂಬರ್ ಏಕೆ ಬರುತ್ತೆ ಎನ್ನುವುದು ತೆರೆಮೇಲೆ ಗೊತ್ತಾಗಲಿದೆ ಎಂದು ಹೇಳಿದರು.

    ನಾಯಕ ನಟ ತಿಲಕ್ ಶೇಖರ್ ಮಾತನಾಡುತ್ತ ಈ ಚಿತ್ರದಲ್ಲಿ ನಾನೊಬ್ಬ ಇನ್‌ವೆಸ್ಟಿಗೇಶನ್ ಆಫೀಸರ್ ಆಗಿ ನಟಿಸಿದ್ದೇನೆ, ಈ ಥರದ ಕಾನ್ಸೆಪ್ಟ್ ನಾನು ಎಲ್ಲೂ ಕೇಳಿಲ್ಲ, ಡೈರೆಕ್ಟರ್ ಬಂದು ನನಗೆ  ಕಥೆ ಹೇಳಿದಾಗ ಟೈಟಲ್ ಸೂಟ್ ಆಗಲ್ಲ ಅನಿಸಿತ್ತು, ಆದರೆ ಶೂಟಿಂಗ್ ಮಾಡ್ತಾ ಹೋದಂತೆ ಕ್ಲಾರಿಟಿ ಸಿಕ್ತು, ಇದು ಬರೀ ಮರ್ಡರ್ ಮಿಸ್ಟ್ರಿಯಲ್ಲ, ತುಂಬಾ ಲೇಯರ್ಸ್ ಗಳಿವೆ. ಚಿತ್ರ ರಿಲೀಸ್  ಹಂತಕ್ಕೆ ಬರಲು ನಿರ್ಮಾಪಕರ ಅವಿರತ ಪ್ರಯತ್ನವೇ ಕಾರಣ. ಚಿತ್ರದಲ್ಲಿ ತುಂಬಾ ಇಂಟರೆಸ್ಟಿಂಗ್ ಎಲಿಮೆಂಟ್ಸ್ ಗಳಿವೆ ಎಂದು ಹೇಳಿದರು,    

  ನಾಯಕಿ ಪ್ರಿಯಾ ಹೆಗ್ಡೆ ಮಾತನಾಡಿ ಚಿತ್ರದ ಟೈಟಲ್ ಕೇಳಿದಾಗ ಇದೊಂದು ಲವ್‌ಸ್ಟೋರಿ ಇರಬೇಕು ಅನ್ಸುತ್ತೆ, ಚಿತ್ರದಲ್ಲಿ ನನ್ನ ಪಾತ್ರಕ್ಕೆ ಹಲವಾರು ಶೇಡ್ಸ್ ಇದ್ದು, ನನ್ನ ಪಾತ್ರದಿಂದ ಚಿತ್ರಕಥೆಗೆ ಟ್ವಿಸ್ಟ್ ಸಿಗುತ್ತದೆ.  ಮಹಿಳಾ ನಿರ್ಮಾಪಕಿಯ ಜತೆ ಕೆಲಸ ಮಾಡಿರುವುದೇ  ಖುಷಿಯ ವಿಚಾರ ಎಂದು ಹೇಳಿದರು.

    ಸಂಗೀತ ನಿರ್ದೇಶಕ ಆರ್‌.ಎಸ್.ಗಣೇಶ್ ನಾರಾಯಣನ್ ಮಾತನಾಡುತ್ತ  ಈ ಚಿತ್ರದಲ್ಲಿ ಎಲ್ಲಾ  ಹಾಡುಗಳನ್ನು  ಸಂದರ್ಭಕ್ಕನುಗುಣವಾಗಿ ಮಾಡಿದ್ದೇವೆ.  ಭೈರವರಾಮ  ತುಂಬಾ ಚೆನ್ನಾಗಿ ಲಿರಿಕ್ ಬರೆದಿದ್ದಾರೆ, ಹಾಡುಗಳೂ ಅಷ್ಟೇ ಚೆನ್ನಾಗಿ ಬಂದಿವೆ, ಎಲ್ಲ ಪಾತ್ರಗಳಿಗೂ ಒಂದೊಂದು ಥೀಮ್ ಮಾಡಿದ್ದೇವೆ ಎಂದು ಹೇಳಿದರು. ನಟ ಸಂತೋಷ್ ನಂದಿವಾಡ, ನಟಿ ಅಪೂರ್ವ ನಾಗರಾಜು, ಖಳನಟ ಅರುಣ್, ಸಾಹಿತಿ, ಡೈಲಾಗ್ ರೈಟರ್ ಬೈರವರಾಮ ಎಲ್ಲರೂ ಚಿತ್ರದ ಕುರಿತಂತೆ ತಮ್ಮ ಅನುಭವಗಳನ್ನು ಹಂಚಿಕೊಂಡರು,

 

Copyright@2018 Chitralahari | All Rights Reserved. Photo Journalist K.S. Mokshendra,